
ಜೈಪುರ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ. ಕೊನೇ ಒಂದು ಏಕದಿನ ಪಂದ್ಯ ಉಳಿದಿದ್ದು, ಈ ಪಂದ್ಯ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಈ ಮಧ್ಯೆ ಭಾರತದ ಮಾಜಿ ಆಟಗಾರ ಆರ್ಪಿ ಸಿಂಗ್ ಕೂಡ ಭಾರತ ತಂಡ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಲಿದೆ ಎಂದಿದ್ದಾರೆ.
ಜೈಪುರದಲ್ಲಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಪಿ ಸಿಂಗ್, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿನ ಪ್ರತಿಭೆಗಳನ್ನು ಹೆಕ್ಕಿ ಆಸ್ಟ್ರೆಲಿಯಾ ಪ್ರವಾಸಕ್ಕೆ ಕಳುಹಿಸಲಾಗಿದೆ. ಟಿ20ಯಿಂದ ಏಕದಿನಕ್ಕೆ ಒಮ್ಮೆಲೇ ಹೊಂದಿಕೊಳ್ಳಲಾಗಲ್ಲ. ಹಾಗಂತ ಭಾರತ ತಂಡ ಇಷ್ಟೇ ಎಂದು ಈಗಲೇ ನಿರ್ಧರಿಸುವಂತಿಲ್ಲ. ಯುವ ಪ್ರತಿಭೆಗಳು ನಾಳೆ ಮಿನುಗುತ್ತಾರೆ ಎಂದಿದ್ದಾರೆ.
'ನೀವು ಟಿ20 ಮಾದರಿಯಿಂದ ಏಕದಿನ ಮಾದರಿಗೆ ಚಲಿಸಿದಾಗ ಅಲ್ಲಿ ತುಂಬಾ ಭಿನ್ನತೆಯಿರುತ್ತದೆ. ಅದರಲ್ಲೂ ನೀವು ಅಂತಾರಾಷ್ಟ್ರೀಯ ಪಂದ್ಯ ಆಡುವಾಗ ಇನ್ನೂ ಸವಾಲು ಇರುತ್ತದೆ. ಕೇವಲ ಎರಡು ಪಂದ್ಯಗಳನ್ನು ಆಧರಿಸಿ ಭಾರತ ತಂಡ ಪ್ರವಾಸ ಸರಣಿಯುದ್ದಕ್ಕೂ ಇಷ್ಟೇ ಎಂದು ನಿರ್ಧರಿಸಲಾಗುವುದಿಲ್ಲ,' ಎಂದು ಸಿಂಗ್ ಹೇಳಿದ್ದಾರೆ.
ಭಾರತ ಪರ 58 ಏಕದಿನ ಪಂದ್ಯಗಳನ್ನಾಡಿರುವ 34ರ ಹರೆಯದ ಆರ್ಪಿ ಸಿಂಗ್ ಮಾತು ಮುಂದುವರೆಸಿ, 'ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ವಿಶ್ವದ ಶ್ರೇಷ್ಠ ಬೌಲರ್ಗಳು. ನಮ್ಮ ಬೆಂಚ್ ಆಟಗಾರರೂ ಉತ್ತಮವಾಗಿದ್ದಾರೆ. ಇನ್ನೇನಿದ್ದರೂ ಕ್ಲಿಕ್ ಆಗಬೇಕಷ್ಟೇ. ಟೀಮ್ ಇಂಡಿಯಾ ಖಂಡಿತವಾಗಿಯೂ ಆಸ್ಟ್ರೇಲಿಯಾ ವಿರುದ್ಧ ತಿರುಗಿಬೀಳಲಿದೆ,' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.