ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ್ದ 147 ರನ್ಗಳ ಗುರಿಯನ್ನು ಭಾರತ, ಇನ್ನು 5 ವಿಕೆಟ್ ಉಳಿದಂತೆ ಗೆದ್ದು ಬೀಗಿದೆ. ಆರಂಭದಲ್ಲಿ ರನ್ ಕಲೆ ಹಾಕಲು ಪರದಾಡಿದ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಸ್ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ತಮ್ಮ ವೃತ್ತಿ ಜೀವನದಲ್ಲೇ ಎಂದು ಮರೆಯಲು ಅಸಾಧ್ಯವಾದ ಇನಿಂಗ್ಸ್ ಕಟ್ಟಿದರು. ಟೀಮ್ ಇಂಡಿಯಾ ಹೋರಾಡಿ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯವನ್ನು ಗೆದ್ದಿತು. ಆದರೆ ಟ್ರೋಫಿ ಮಾತ್ರ ಎತ್ತಲಲಿಲ್ಲ. ಇದಕ್ಕೆ ಕಾರಣ ಏನು? ಎಂಬ ಬಗ್ಗೆ ವರದಿ ಇಲ್ಲಿದೆ.
ಈ ಬಾರಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಂದ್ಯದ ಫಲಿತಾಂಶಕ್ಕಿಂತಲೂ ಪಂದ್ಯದ ವೇಳೆ ನಡೆದ ಘಟನೆಗಳು ಭಾರೀ ಚರ್ಚೆಗೆ ಗುರಿಯಾಗಿದ್ದವು. ಈಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈ ಸಹ ಮಿಲಾಯಿಸಲಿಲ್ಲ. ಈ ಬಗ್ಗೆ ಪಿಸಿಬಿ, ಐಸಿಸಿಗೆ ದೂರನ್ನು ಸಹ ನೀಡಿತ್ತು. ಈ ಹ್ಯಾಂಡ್ ಶೇಕ್ ವಿವಾದ ತೆರೆಯ ಹಿಂದೆ ಸರಿಯುತ್ತಿರುವಾಗಲೇ, ಟೀಮ್ ಇಂಡಿಯಾ ಪಿಸಿಬಿ ಅಧ್ಯಕ್ಷರಿ ನಖ್ವಿ ಭಾರೀ ಮುಖಭಂಗವಾಗಿದೆ.

ಟೀಮ್ ಇಂಡಿಯಾ ಒಂಬತ್ತನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆದರೆ ಟ್ರೋಫಿ ವಿತರಣಾ ಸಮಾರಂಭದಿಂದ ದೂರ ಉಳಿಯಿತು. ಇದಕ್ಕೆ ಕಾರಣ ಭಾರತ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಅಲ್ಲದೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಟೀಮ್ ಇಂಡಿಯಾ ಹಿಂದೇಟು ಹಾಕಿತು. ಈ ಮೂಲಕ ಭಾರತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರನ್ನು ತೀವ್ರವಾಗಿ ಅವಮಾನಿಸಿತು. ಅಲ್ಲದೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಿಗೂ ಭಾರತ ಅವಮಾನ ಮಾಡಿತು. ನಖ್ವಿ ಅವರೇ ಎಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಭಾರತ ಏಷ್ಯಾ ಕಪ್ ಗೆದ್ದರೂ ಸಹ ಟ್ರೋಫಿಯನ್ನು ಸ್ವೀಕರಿಸಲಿಲ್ಲ. ಅಲ್ಲದೆ ಟೀಮ್ ಇಂಡಿಯಾದ ನಾಯಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿಲ್ಲ.
ಸಾಮಾನ್ಯವಾಗಿ ಒಂದು ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ಸಮಾರೋಪ ಸಮಾರಂಭ ನಡೆಯುತ್ತದೆ. ಆದರೆ ಭಾನುವಾರ ಫೈನಲ್ನಲ್ಲಿ ಟೀಮ್ ಇಂಡಿಯಾ ಗೆದ್ದು ಗಂಟೆಗಳಾದ್ರೂ ಸಮಾರೋಪ ನಡೆಯಲಿಲ್ಲ. ಇದಕ್ಕೆ ಕಾರಣ ಟೀಮ್ ಇಂಡಿಯಾ ಒಂದು ಗಂಟೆಗೂ ಹೆಚ್ಚು ಕಾಲ ಡ್ರೆಸ್ಸಿಂಗ್ ರೂಮ್ನಿಂದ ಹೊರ ಬರಲೇ ಇಲ್ಲ. ಇದರಿಂದ ಪಿಸಿಬಿ ಅಧ್ಯಕ್ಷರಿಗೆ ಭಾರಿ ಮುಜುಗರವಾಯಿತು. ಅಲ್ಲದೆ ಇವರು ಒಂದು ಗಂಟೆಗೂ ಹೆಚ್ಚು ಕಾಲ ಪೋಡಿಯಂನಲ್ಲಿ ಕಾದರು. ಆದರೆ ಭಾರತೀಯ ಆಟಗಾರರು ಮಾತ್ರ ಪೋಡಿಯಂ ಬಳಿ ಬರಲಿಲ್ಲ. ರನ್ನರ್ ಅಪ್ ಪ್ರಶಸ್ತಿಯನ್ನು ಪಾಕ್ ಸ್ವೀಕರಿಸುತ್ತಿದ್ದಂತೆ ಸಮಾರಂಭವನ್ನು ಕೊನೆಗೊಳಿಸಲಾಯಿತು. ಈ ವೇಳೆ ಮೈದಾನದಲ್ಲಿ ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಸಹ ಕೇಳಿ ಬಂದವು.
ಟೀಮ್ ಇಂಡಿಯಾ ಈ ಪಂದ್ಯಕ್ಕೂ ಮುನ್ನವೇ ಏಷ್ಯಾ ಕಪ್ ಗೆದ್ದರೆ, ಪಿಸಿಬಿ ಅಧ್ಯಕ್ಷ ನಖ್ವಿ ಅವರಿಂದ ಪ್ರಶಸ್ತಿ ಸ್ವಿಕರಿಸುವುದಿಲ್ಲ ಎಂಬ ಊಹಾಪೋಗಳು ಇದ್ದವು. ಪಂದ್ಯ ಮುಗಿದ ಬಳಿಕ ಊಹಾಪೋಗಳು ನಿಜವಾದವು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಮತ್ತು ದೇಶದ ಗೃಹ ಸಚಿವರೂ ಆಗಿರುವ ನಖ್ವಿ, ತಮ್ಮ ಭಾರತ ವಿರೋಧಿ ನಿಲುವಿಗೆ ಹೆಸರುವಾಸಿಯಾಗಿದ್ದಾರೆ.