ಜುಲೈ 31 ಬುಧವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯವು ಮಂಗಳವಾರ ಪಲ್ಲೆಕೆಲೆಯಲ್ಲಿ ನಡೆಯಿತು. ಈ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾ 3-0 ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಶ್ರೀಲಂಕಾ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.
ಪಲ್ಲೆಕೆಲೆ ಮೈದಾನದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 43 ರನ್ಗಳಿಂದ ಗೆದ್ದಿತ್ತು. ಆ ಬಳಿಕ ಎರಡನೇ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಟೀಮ್ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದಡಿ 7 ವಿಕೆಟ್ಗಳ ಜಯ ಸಾಧಿಸಿತ್ತು.
ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.

ಟಾಪ್ ಬ್ಯಾಟಿಂಗ್ ಆರ್ಡರ್ ಕುಸಿತ ಕಂಡಿತ್ತು. ಈ ವೇಳೆ ಸಂಕಷ್ಟದಲ್ಲಿದ ಟೀಮ್ ಇಂಡಿಯಾ ಪರ ಶುಭಮನ್ ಗಿಲ್ (39), ರಿಯಾನ್ ಪರಾಗ್ (26) ಮತ್ತು ವಾಷಿಂಗ್ಟನ್ ಸುಂದರ್ (25) ನೆರವಾದರು. ಈ ಮೂಲಕ ಭಾರತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ಗಳನ್ನು ಕಲೆ ಹಾಕಿತ್ತು.
ಶ್ರೀಲಂಕಾ ಪರ ಮಹೀಶ್ ತೀಕ್ಷಣ 3 ವಿಕೆಟ್ಗಳನ್ನು ಕಬಳಿಸಿದರೆ, ವನಿಂದು ಹಸರಂಗ 2 ವಿಕೆಟ್ ಉರುಳಿಸಿದರು. ಚಮಿಂದು ವಿಕ್ರಮಸಿಂಘೆ, ಅಸಿತ ಫೆರ್ನಾಂಡೊ ಮತ್ತು ರಮೇಶ್ ಮೆಂಡಿಸ್ ತಲಾ ಒಂದೊಂದು ವಿಕೆಟ್ ಪಡೆದರು.
138 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆದಿತ್ತು. ಪಾತುಮ್ ನಿಸ್ಸಾಂಕ (26), ಕುಸಲ್ ಮೆಂಡಿಸ್ (43) ಹಾಗು ಕುಸಲ್ ಪೆರೇರಾ (46) ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ಕೊನೆಯಲ್ಲಿ ಲಂಕಾ ತಂಡ ಹಳಿ ತಪ್ಪಿತ್ತು.
ಶ್ರೀಲಂಕಾ ಗೆಲ್ಲಲು ಕೊನೆಯ 2 ಓವರ್ಗಳಲ್ಲಿ 9 ರನ್ ಗಳಿಸಬೇಕಾಗಿತ್ತು. ಈ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಬೌಲಿಂಗ್ ದಾಳಿಗೆ ಇಳಿದು ತಲಾ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು.
ಹೀಗಾಗಿ ಪಂದ್ಯ ಟೈ ಆಗಬೇಕಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 2 ರನ್ ಗಳಿಸಿತು. ಬಳಿಕ ಈ ಪಂದ್ಯವನ್ನು ಭಾರತ 4 ರನ್ಗಳಿಂದ ಗೆದ್ದುಕೊಂಡಿತು. ಈ ಮೂಲಕ ಟೀಮ್ ಇಂಡಿಯಾದ ನೂತನ ಟಿ20 ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅದ್ಧೂರಿ ಆರಂಭ ಪಡೆದಿದ್ದಾರೆ.