
ನವದೆಹಲಿ, ಜುಲೈ 22: ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಬದಲು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಬಯಸಿದ್ದರು. ಇದಕ್ಕಾಗಿ ಭಾರತೀಯ ಸೇನೆಯನ್ನು ಕೋರಿಕೊಂಡಿದ್ದರು ಕೂಡ. ಧೋನಿ ಕೋರಿಕೆಗೆ ಭಾರತೀಯ ಸೇನೆಯಿಂದ ಅನುಮೋದನೆ ದೊರೆತಿದೆ.
ಕೂಲ್ ಕ್ಯಾಪ್ಟನ್ ಧೋನಿ ತಾನು 2 ತಿಂಗಳ ಕಾಲ ತನ್ನ ಪ್ಯಾರಾಚೂಟ್ ರೆಜಿಮೆಂಟ್ನ ತರಬೇತಿಯಲ್ಲಿ ಪಾಲ್ಗೊಳ್ಳುವುದಾಗಿ ಸೇನೆಯನ್ನು ವಿನಂತಿಸಿಕೊಂಡಿದ್ದರು. ಇದಕ್ಕೆ ಭಾರತೀಯ ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಅನುಮೋದನೆ ನೀಡಿರುವುದಾಗಿ ಸೇನೆಯ ಉನ್ನತ ಮೂಲ ತಿಳಿಸಿದೆ.
'ಧೋನಿ ಕೋರಿಕೆಗೆ ಆರ್ಮಿ ಚೀಪ್ ಜನರಲ್ ಬಿಪಿನ್ ರಾವತ್ ಅನುಮೋದನೆ ನೀಡಿದ್ದಾರೆ. ಗೌರವ ಲೆಫ್ಟಿನೆಂಟ್ ಕರ್ನಲ್ ಧೋನಿ, ಇನ್ನು 2 ತಿಂಗಳ ಕಾಲ ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ನಲ್ಲಿ ತರಬೇತಿ ಪಡೆಯಲಿದ್ದಾರೆ,' ಎಂದು ಮೂಲವೊಂದು ಮಾಹಿತಿ ನೀಡಿದೆ.
ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ನಲ್ಲಿ ಹೊರಬಿದ್ದ ಬೆನ್ನಲ್ಲೇ ಧೋನಿ ನಿವೃತ್ತಿ ಕುರಿತು ಮಾತುಗಳು ಕೇಳಿ ಬಂದಿದ್ದವು. ನಿವೃತ್ತಿ ವಿಚಾರವನ್ನು ಸದ್ಯಕ್ಕೆ ತಳ್ಳಿ ಹಾಕಿರುವ ಧೋನಿ, ತಾನು ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಿಂದ ಹೊರಗುಳಿಯುವುದಾಗಿ ಹೇಳಿಕೊಂಡಿದ್ದರು.
ಆಗಸ್ಟ್ 3ರಿಂದ ವಿಂಡೀಸ್ ಪ್ರವಾಸ ಸರಣಿ ಆರಂಭವಾಗಲಿದೆ. ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ಸರಣಿಗಳಿಗೆ ಧೋನಿ ಜಾಗದಲ್ಲಿ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ನಲ್ಲಿ ಕೀಪಿಂಗ್ ಹೊಣೆ ವೃದ್ಧಿಮಾನ್ ಸಾಹ ವಹಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. 3 ಟಿ20 ಪಂದ್ಯಗಳೊಂದಿಗೆ ಸರಣಿ ಚಾಲನೆಗೊಳ್ಳಲಿದೆ.