ಸದ್ಯ ಭಾರತ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಡುತ್ತಿದೆ. ಈ ಸರಣಿ ಮುಗಿದ ಬಳಿಕ ಭಾರತದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಬೇಕಿದೆ. ಈ ಸರಣಿಗೆ ಇನ್ನೇನು ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ತವರಿನಲ್ಲಿ ನಡೆಯುವ ಸರಣಿಗೆ ತನ್ನನ್ನು ಪರಿಗಣಿಸುವಂತೆ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಆಟದ ಮೂಲಕ ಒತ್ತಾಯಿಸಿದ್ದಾರೆ.
ಲಕ್ನೋದಲ್ಲಿ ನಡೆಯುತ್ತಿರುವ ಭಾರತ "ಎ" ಹಾಗೂ ಆಸ್ಟ್ರೇಲಿಯಾ "ಎ" ನಡುವಣ ಪಂದ್ಯದಲ್ಲಿ ಆತಿಥೇಯ ತಂಡ 7 ವಿಕೆಟ್ ಕಳೆದುಕೊಂಡು 531 ರನ್ಗಳಿಸಿದೆ. ಈ ವೇಳೆ ಮಳೆ ಕಾಟ ನೀಡಿದ್ದರಿಂದ ಪಂದ್ಯ ನಿಂತಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ನಾಲ್ಕನೇ ದಿನದಾಟದಲ್ಲಿ 4 ವಿಕೆಟ್ಗೆ 403 ರನ್ ಗಳಿಂದ ಆಟ ಮುಂದುವರೆಸಿತು. ಈ ವೇಳೆ ಕನ್ನಡಿದ ದೇವದತ್ ಪಡಿಕ್ಕಲ್ ಅಜೇಯ 86 ಹಾಗೂ ಧ್ರುವ್ ಜುರೇಲ್ ಅಜೇಯ 113 ರನ್ಗಳಿಂದ ಆಟ ಮುಂದುವರೆಸಿದರು.

ಶುಕ್ರವಾರ ದಿನದಾಟದಲ್ಲಿ ದೇವದತ್ ಪಡಿಕ್ಕಲ್ ತಮ್ಮ ನೈಜ್ಯ ಆಟವನ್ನು ಆಡಿ ರನ್ ಕಲೆ ಹಾಕಿದರು. ಅಲ್ಲದೆ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 150 ರನ್ ಬಾರಿಸಿ ಅಬ್ಬರಿಸಿದರು. ಇವರಿಗೆ ಧ್ರುವ್ ಜುರೇಲ್ ಉತ್ತಮ ಸಾಥ್ ನೀಡಿದರು. ಗುರವಾರ ಶತಕ ಬಾರಿಸಿದ್ದ ಧ್ರುವ್ 140 ರನ್ಗಳಿಗೆ ಔಟ್ ಆದರು. ಈ ಜೋಡಿ 5ನೇ ವಿಕೆಟ್ಗೆ 228 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ ಆತಿಥೇಯ ತಂಡ ಇನಿಂಗ್ಸ್ ಮುನ್ನಡೆ ಸಾಧಿಸುವ ಆಸೆಯನ್ನು ಚಿಗುರಿಸಿತು.
ಈಗಾಗಲೇ ಟೀಮ್ ಇಂಡಿಯಾದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿರುವ ದೇವದತ್ ಪಡಿಕ್ಕಲ್ 1 ಅರ್ಧಶತಕ ಸೇರಿದಂತೆ 90 ರನ್ ಬಾರಿಸಿದ್ದಾರೆ. ಭಾರತ "ಎ" ಪರ ದೇವದತ್ ನೀಡಿರುವ ಅಮೋಘ ಪ್ರದರ್ಶನ ಇವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪರಿಗಣಿಸುವಂತೆ ಒತ್ತಾಯಿಸುತ್ತಿದೆ. ಇವರು ಇತ್ತೀಚಿಗೆ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇದೇ ಪ್ರದರ್ಶನವನ್ನು ಭಾರತ ಎ ತಂಡದ ಪರವೂ ಮುಂದುವರೆಸಿದ್ದಾರೆ. ಇವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಥಾನ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಇವರು ಈಗಾಗಲೇ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ವರ್ಕ್ ಲೋಡ್ ತಪ್ಪಿಸಿಕೊಳ್ಳಲು ಇವರು ಈ ಸರಣಿಯಿಂದ ವಿಶ್ರಾಂತಿಯನ್ನು ಸಹ ಪಡೆಯಲೂ ಬಹುದಾಗಿದೆ.