ನವದೆಹಲಿ, ಜೂ.3: 'ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ನೆರವಿಲ್ಲದೆ ಭಾರತೀಯ ಕ್ರಿಕೆಟ್ ಪರಿಪೂರ್ಣವಾಗಲ್ಲ ಅಸಾಧ್ಯ' ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ ಹೇಳಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಸ್ಥಾನಮಾನ ನೀಡುವ ಸುಳಿವು ನೀಡಿದ್ದಾರೆ.
ಬಿಸಿಸಿಐ ರಚಿಸಿರುವ ಹೊಸ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಅದರೆ, ರಾಹುಲ್ ದ್ರಾವಿಡ್ ಅವರಿಗೆ ಯಾವುದೇ ಸ್ಥಾನ ನೀಡಿಲ್ಲದಿರುವುದು ಹಲವು ಪ್ರಶ್ನೆ, ಊಹಾಪೋಹಕ್ಕೆ ನಾಂದಿ ಹಾಡಿತ್ತು. [ಬಿಸಿಸಿಐ ಟೀಂ ಸೇರಿದ ವಿವಿಎಸ್, ಗಂಗೂಲಿ, ತೆಂಡೂಲ್ಕರ್]
ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ದಾಲ್ಮಿಯಾ, ಬಿಸಿಸಿಐ ಅತ್ಯಂತ ಶೀಘ್ರವಾಗಿ ದ್ರಾವಿಡ್ ಅವರ ಪಾತ್ರದ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದೆ. ಎಲ್ಲರೂ ಒಂದೇ ಸಮಿತಿಯಲ್ಲಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಕೋಚ್ ಆಗಿ ರಾಹುಲ್ ದ್ರಾವಿಡ್?: ಭಾರತದ ಅಂಡರ್-19 ಹಾಗೂ ಎ ತಂಡದ ಕೋಚ್ ಆಗಿ ಆಯ್ಕೆ ರಾಹುಲ್ ದ್ರಾವಿಡ್ ಆಯ್ಕೆಯಾಗುತ್ತಾರೆ ಎಂದು ಹಲವು ಕ್ರಿಕೆಟ್ ವೆಬ್ ಸೈಟ್ ಗಳು ಬರೆದಿದ್ದವು, ಸಲಹಾ ಸಮಿತಿ ಸೇರಲು ದ್ರಾವಿಡ್ ಇಚ್ಛೆಪಡದ ಕಾರಣ ಅವರಿಗೆ ಯುವ ಕ್ರಿಕೆಟರ್ಸ್ ಬೆಳೆಸುವ ಜವಾಬ್ದಾರಿ ವಹಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಲಹಾಕಾರರಾಗಿ ಕಾರ್ಯನಿರ್ವಹಿಸಿರುವ ದ್ರಾವಿಡ್ ಅವರು ಐಪಿಎಲ್ ನಲ್ಲಿ ನಾಯಕ, ಕೋಚ್ ಆಗಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿನ ಅಜಿಂಕ್ಯ ರಹಾನೆ ಫಾರ್ಮ್ ಕೂಡಾ ದ್ರಾವಿಡ್ ಅವರ ಸಲಹೆ ಸೂಚನೆ ಫಲ ಎಂಬುದನ್ನು ಮರೆಯುವಂತಿಲ್ಲ. [ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿಗೆ ಭರ್ಜರಿ ಉಡುಗೊರೆ]
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಲಹಾಕಾರರಾಗಿ ಕಾರ್ಯನಿರ್ವಹಿಸಿರುವ ದ್ರಾವಿಡ್ ಯುವ ಆಟಗಾರರಿಂದ ಪ್ರತಿಭೆಯನ್ನು ಹೊರ ತೆಗೆಯಲು ಯಶಸ್ವಿಯಾಗಿದ್ದರು. ರಾಜಸ್ಥಾನದ ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡಾ ಅವರು ದ್ರಾವಿಡ್ ಸಲಹೆಯ ಮೇರೆಗೆ ಉತ್ತಮ ಪ್ರದರ್ಶನ ನೀಡಿದ್ದರು. ಸಮಯದ ಅಭಾವದಿಂದ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಪೂರ್ಣಾವಧಿ ಕೋಚ್ ಆಗಲು ರಾಹುಲ್ ದ್ರಾವಿಡ್ ಹಿಂದೇಟು ಹಾಕುತ್ತಿದ್ದಾರೆ. ವೃತ್ತಿಜೀವನದಲ್ಲಿ ಹೆಚ್ಚಿನ ಸಮಯ ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ. ಕುಟುಂಬದೊಡನೆ ಹೆಚ್ಚಿನ ಕಾಲ ಕಳೆಯಲು ದ್ರಾವಿಡ್ ಅವರು ಬೇರೆ ಹುದ್ದೆ ಬಯಸಿದ್ದಾರೆ ಎಂಬ ಸುದ್ದಿಯೂ ಇದೆ.
ಸಲಹಾ ಸಮಿತಿಯಿಂದ ರಾಹುಲ್ ದ್ರಾವಿಡ್ರನ್ನು ಕೈಬಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಉತ್ತರಿಸಿ, ಭಾರತದ ಕ್ರಿಕೆಟ್ ದಿಗ್ಗಜರ ಸೇವೆಯನ್ನು ಬಳಸಿಕೊಳ್ಳಲು ಬಿಸಿಸಿಐ ಬಯಸುತ್ತಿದೆ. ಸಮಯ ಬಂದಾಗ ಆ ಕುರಿತು ಘೋಷಣೆ ಮಾಡಲಾಗುತ್ತದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)