ನವದೆಹಲಿ, ಮೇ 07: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಬಗೆಗಿನ ಗೊಂದಲಗಳಿಗೆ ಭಾನುವಾರದಂದು ತೆರೆ ಬಿದ್ದಿದೆ. ಬಿಸಿಸಿಐ ವಿಶೇಷ ಮಹಾಸಭೆ (ಎಸ್ಜಿಎಂ) ಯಲ್ಲಿ ಭಾರತ ತಂಡ ಆಡಬೇಕೆಂದು ಅವಿರೋಧವಾಗಿ ನಿರ್ಣಯ ಕೈಗೊಂಡಿದೆ.
ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಬಣ ಈಗಲೂ ಐಸಿಸಿಗೆ ಸೆಡ್ಡು ಹೊಡೆಯಲು ಟೂರ್ನಿ ಬಹಿಷ್ಕರಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಗೊಂದಲ ಉಂಟಾಗಿತ್ತು. ಚಾಂಪಿಯನ್ಸ್ ಟ್ರೋಫಿ ಬಹಿಷ್ಕರಿಸಿದರೆ 2023ರವರೆಗೆ ಐಸಿಸಿಯ ಎಲ್ಲ ಟೂರ್ನಿಗಳಿಂದ ನಿಷೇಧ ಎದುರಾಗುವ ಅಪಾಯ ಎದುರಾಗಿತ್ತು. [#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

ಬಿಸಿಸಿಐ ಎಸ್ಜಿಎಂಯಲ್ಲಿ ಕೈಗೊಂಡ ನಿರ್ಣಯದ ನಂತರ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಖಚಿತವಾಗಿದೆ. ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಭಾರತ ತಂಡವನ್ನು ಮಂಗಳವಾರದಂದು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮೇಲೆ ಒತ್ತಡ ಹೇರಲು ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಸಿಸಿಐಗೆ ಸುಪ್ರೀಂ ನೇಮಿತ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಚಾಟಿ ಬೀಸಿತ್ತು. [ಪೂರ್ಣ ವರದಿ ಇಲ್ಲಿ ಓದಿ]
ಇಂಗ್ಲೆಂಡಿನಲ್ಲಿ ಜೂನ್ 1ರಿಂದ 8ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭಾರತ ತಂಡ ಜೂನ್ 4ರಂದು ಸಾಂತಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. 2013ರ ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ಭಾರತ ಹಾಲಿ ಚಾಂಪಿಯನ್ ಆಗಿದೆ.