
ನವದೆಹಲಿ: ಜುಲೈ 1ರಂದು ಭಾರತದಾದ್ಯಂತ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ನೆನೆದು ಅನೇಕ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಪ್ರಾಣ ಉಳಿಸುತ್ತಿರುವ ವೈದ್ಯರಿಗೆ ಕ್ರಿಕೆಟಿಗರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಶಿಖರ್ ಧವನ್ ಮೊದಲಾದವರು ಟ್ವೀಟ್ ಮಾಡಿದ್ದಾರೆ. ಕೋವಿಡ್-19 ದಿನಗಳಲ್ಲಿ ಬಿಡುವಿಲ್ಲದೆ ಶ್ರಮಿಸುತ್ತಿರುವ ವೈದ್ಯರಿಗೆ ಶುಭಾಶಯ ಕೋರಿರುವ ಕ್ರಿಕೆಟಿಗರು ಕೃತಜ್ಞತೆ ಸಲ್ಲಿಸಿದ್ದಾರೆ.
ಕ್ರಿಕೆಟಿಗರು ಮಾಡಿರುವ ಟ್ವೀಟ್ಗಳಲ್ಲಿ ಮಾಜಿ ಸ್ಫೋಟಕ ಬ್ಯಾಟ್ಸ್ಮನ್, ಯುವರಾಜ್ ಸಿಂಗ್ ಟ್ವೀಟ್ ಹೆಚ್ಚು ಗಮನ ಸೆಳೆಯುತ್ತಿದೆ. 'ನಮ್ಮ ದಿನಗಳ ನಿಜವಾದ ಹೀರೋಗಳಿಗೆ ಈ ದಿನ ಅರ್ಪಣೆ. ಈ ಕತ್ತಲ ದಿನಗಳಲ್ಲಿ ನಮ್ಮ ಬದುಕಿಗೆ ಬೆಳಕಾಗಿರುವ ನಿಮಗೆ ಧನ್ಯವಾದಗಳು. ನಾವು ನಿಮ್ಮ ಸೇವೆಗೆ ಕೃತಜ್ಞರಾಗಿದ್ದೇವೆ' ಎಂದು ಯುವಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಯುವಿ ಕೂಡ 'ಯುವಿಕ್ಯಾನ್' ಎಂಬ ವಿಶಿಷ್ಠ ಕಾರ್ಯಕ್ರಮದ ಮೂಲಕ ದೇಶದ ಆಸ್ಪತ್ರೆಗಳಲ್ಲಿ ಬೆಡ್, ಆರೋಗ್ಯ ಸಲಕರಣೆಗಳನ್ನು ಹೆಚ್ಚಿಸುವ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಂಥ ಪ್ರಮುಖ ಆಟಗಾರರು ಮುಂದಿನ ಪ್ರವಾಸ ಸರಣಿಗೆ ಸಿದ್ಧತೆ ನಡೆಸುತ್ತಿರುವುದರಿಂದ ಅವರಿಂದ ವೈದ್ಯರ ದಿನದ ಸಂದೇಶವೇನೂ ಕಾಣಿಸಿಲ್ಲ.