
ಟಿ20 ವಿಶ್ವಕಪ್ನಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡ ಹರಿಣಗಳ ವಿರುದ್ಧದ ಪಂದ್ಯದಲ್ಲಿ ಎಡವಿದ್ದು ಆಘಾತ ಅನುಭವಿಸಿದೆ. ಈ ಸೋಲು ಭಾರತ ತಂಡಕ್ಕೆ ಮಾತ್ರವಲ್ಲದೆ ಪಾಕಿಸ್ತಾನ ತಂಡಕ್ಕೂ ದೊಡ್ಡ ಆಘಾತವನ್ನು ನೀಡಿದ್ದು ಪಾಕ್ ತಂಡದ ಸೆಮಿಫಯನಲ್ ಕನಸನ್ನು ಬಹುತೇಕ ಅಂತ್ಯಗೊಳಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ನಿಡಿರುವ ಹೇಳಿಕೆಯೊಂದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತಕ್ಕೇರಲು ವಿಫಲವಾದರೆ ಅದಕ್ಕೆ ಕಾರಣ ಪರ್ತ್ನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಸೋಲು ಅನುಭವಿಸಿದ್ದು ಕಾರಣ ಎಂದಿದ್ದಾರೆ ವಾಸಿಂ ಜಾಫರ್. ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನ ತಂಡ ಸೆಮಿಫೈನಲ್ಗೆ ಪ್ರವೇಶ ಪಡೆಯ ಬೇಕಿದ್ದರೆ ಕೆಲ ಪಂದ್ಯಗಳ ಫಲಿತಾಂಶಗಳು ಪಾಕಿಸ್ತಾನ ತಂಡ ಬಯಸಿದಂತೆಯೇ ಬರಬೇಕಾಗಿತ್ತು. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆಲ್ಲುವುದು ಕೂಡ ಒಂದಾಗಿತ್ತು.
ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 5 ವಿಕೆಟ್ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಟೀಮ್ ಇಂಡಿಯಾ ಈ ಟೂರನಿಯಲ್ಲಿ ಮೊದಲ ಸೋಲಿನ ರುಚಿ ಅನುಭವಿಸಿದೆ. ಇತ್ತ ದಕ್ಷಿಣ ಆಫ್ರಿಕಾ ತಂಡ ಸದ್ಯ ಟೂರ್ನಿಯಲ್ಲಿ ಅಜೇಯವಾಗಿಳಿದುಕೊಂಡಿದೆ.
ಈ ಫಲಿತಾಂಶದ ಬಳಿಕ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. "ಪಾಕಿಸ್ತಾನ ತಂಡವೇನಾದರೂ ವಿಶ್ವಕಪ್ನಿಂದ ಹೊರಬಿದ್ದರೆ ಅದು ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ ಕಾರಣದಿಂದಾಗಿ ಅಲ್ಲ. ಅದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಅನುಭವಿಸಿದ ಕಾರಣದಿಂದಾಗಿ" ಎಂದು ವಾಸಿಂ ಜಾಫರ್ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಶದಬ್ ಖಾನ್ ಮೂರು ವಿಕೆಟ್ ಪಡೆದು ಮಿಂಚಿದ್ದರೆ ರಿಜ್ವಾನ್ 49 ರನ್ಗಳನ್ನು ಗಳಿಸಿದ್ದರು. ಈ ಮೂಲಕ ಈ ಬಾರಿಯ ವಿಶ್ವಕಪ್ನಲ್ಲಿ ಮೊದಲ ಗೆಲುವು ಸಾಧಿಸಿದ ಪಾಕ್ ತಂಡ ಅಂಕಪಟ್ಟಿಯಲ್ಲಿ ಖಾತೆಯ ತೆರೆದಿದೆ.