ಟ್ರೋಫಿ ಗೆದ್ದ ಬಳಿಕ ಸಂಪ್ರದಾಯ ಬದಲಾಯಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ!: ವಿಡಿಯೋ

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಕ್ತಾಯವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಸೋಲು ಅನುಭವಿಸಿದ್ದ ಭಾರತ ತಂಡ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಅದ್ಭುತ ರೀತಿಯಲ್ಲಿ ತಿರುಗಿಬಿದ್ದಿದ್ದು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಸರಣಿಯನ್ನು ಗೆಲ್ಲುವ ಮೂಲಕ ಈ ವರ್ಷದ ಹತ್ತನೇ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಂತಾಗಿದೆ. ಆದರೆ ಈ ಪಂದ್ಯದ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾ ಬಹಳ ಸಮಯದಿಂದ ಈವರೆಗೆ ನಡೆಸಿಕೊಂಡು ಬಂದಿದ್ದಂತಾ ಒಂದು ಸಂಪ್ರದಾಯವನ್ನು ಮುರಿದಿದ್ದಾರೆ.
ಹಾಗಾದರೆ ಆ ಸಂಪ್ರದಾಯ ಏನು? ರೋಹಿತ್ ಶರ್ಮಾ ಆ ಸಂಪ್ರದಾಯವನ್ನು ಮುರಿದಿದ್ದು ಯಾಕೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಧೋನಿಯಿಂದ ಆರಂಭವಾಗಿತ್ತು ಸಂಪ್ರದಾಯ
ಟೀಮ್ ಇಂಡಿಯಾದಲ್ಲಿ ಧೋನಿ ನಾಯಕನಾಗಿದ್ದ ಸಂದರ್ಭದಲ್ಲಿ ಒಂದು ವಿಭಿನ್ನ ಸಂಪ್ರದಾಯವನ್ನು ಆರಂಭಿಸಿದ್ದರು. ಸರಣಿಯನ್ನು ಗೆದ್ದ ಬಳಿಕ ಟ್ರೋಫಿಯನ್ನು ಸಾಮಾನ್ಯವಾಗಿ ನಾಯಕ ಅಥವಾ ಇತರ ಯಾರಾದರೂ ಹಿರಿಯ ಆಟಗಾರರು ಟ್ರೋಫಿಯನ್ನು ಹಿಡಿದುಕೊಂಡು ಫೋಟೋಗೆ ಫೋಸ್ ಕೊಡುವುದು ಸಮಾನ್ಯವಾಗಿತ್ತು. ಆದರೆ ಧೀನಿ ನಾಯಕನಾದ ಬಳಿಕ ಟ್ರೋಫಿಯನ್ನು ಗೆದ್ದು ಟ್ರೋಫಿ ಹಿಡಿದುಕೊಂಡು ಸಂಭ್ರಮಿಸುವ ವೇಳೆಯಲ್ಲಿ ಆ ಟ್ರೋಫಿಯನ್ನು ತಂಡದ ಅತ್ಯಂತ ಕಿರಿಯ ಆಟಗಾರನ ಕೈಗೆ ನೀಡಿ ಸಂಭ್ರಮಿಸುವ ಪರಿಪಾಟವನ್ನು ಆರಂಭಿಸಿದರು. ಮುಂದೆ ನಾಯಕ ವಿರಾಟ್ ಕೊಹ್ಲಿ ಕೂಡ ಇದನ್ನು ಮುಂದುವರಿದಿದ್ದರು. ಬಳಿಕ ನಾಯಕನಾದ ರೋಹಿತ್ ಶರ್ಮಾ ಕೂಡ ಈ ಹಿಂದಿನವರೆಗೂ ಇದೇ ರೀತಿ ಮಾಡಿದ್ದರು. ಆದರೆ ಆಸಿಸ್ ವಿರುದ್ಧದ ಸರಣಿಯಲ್ಲಿ ಈ ಸಂಪ್ರದಾಯವನ್ನು ಶರ್ಮಾ ಮುರಿದರು.
ಹಿರಿಯ ಆಟಗಾರ ಡಿಕೆಗೆ ಟ್ರೋಫಿ ನೀಡಿದ ರೋಹಿತ್
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಅಂತಿಮ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಟೀಮ್ ಇಂಡಿಯಾ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಟ್ರೋಫಿಯನ್ನು ಸ್ವೀಕರಿಸಿದ ನಾಯಕ ರೋಹಿತ್ ಶರ್ಮಾ ನಂತರ ತಂಡದಲ್ಲಿನ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ಗೆ ಹೋಗಿ ನೀಡಿದ್ದರು. ಈ ಮೂಲಕ ಅನುಭವಿ ಆಟಗಾರನಿಗೆ ವಿಶೇಷ ಗೌರವ ನೀಡಿದರು ನಾಯಕ ರೋಹಿತ್ ಶರ್ಮಾ.

ಫಿನಿಷರ್ ಆಗಿ ಮಿಂಚುತ್ತಿದ್ದಾರೆ ಡಿಕೆ
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ಗೆ ಬ್ಯಾಟಿಂಗ್ ನಡೆಸಲು ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಆದರೆ ಸಿಕ್ಕ ಸಣ್ಣ ಅವಕಾಶದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದರಲ್ಲೂ ಎರಡನೇ ಪಂದ್ಯದಲ್ಲಿ ಅಂತಿಮ ಓವರ್ನಲ್ಲಿ ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಗೆಲುವು ಸಾರಿದ್ದರು. ಈ ಮೂಲಕ ಮುಂದಿನ ವಿಶ್ವಕಪ್ ಟೂರ್ನಿಗೆ ಸರಿಯಾದ ಹಾದಿಯಲ್ಲಿರುವುದಾಗಿ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಸಾರಿ ಹೇಳಿದಂತಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಸಜ್ಜು
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ಮತ್ತೊಂದು ಸರಣಿಗೆ ಈಗ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲು ಸಜ್ಜಾಗಿದ್ದು ಬುಧವಾರದಿಂದ ಈ ಸರಣಿ ಆರಂಭವಾಗಲಿದೆ. ವಿಶ್ವಕಪ್ಗೆ ಮುನ್ನ ಟೀಮ್ ಇಂಡಿಯಾಗೆ ಇದು ಕೊನೆಯ ದ್ವಿಪಕ್ಷೀಯ ಸರಣಿ ಎಂಬುದು ಗಮನಾರ್ಹವಾಗಿದೆ. ಈ ಸರಣಿಯ ಮುಕ್ತಾಯದ ಬಳಿಕ ವಿಶ್ವಕಪ್ನಲ್ಲಿ ಭಾಗವಹಿಸುವ ಭಾರತ ತಂಡ ಆಸ್ಟ್ರೇಲಿಯಾಗೆ ಹಾರಲಿದ್ದು ವಿಶ್ವಕಪ್ಗೆ ಮುನ್ನ ಎರಡು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications