
ಟೀಮ್ ಇಂಡಿಯಾದ ಸೆನ್ಸೇಶನಲ್ ಬ್ಯಾಟರ್ ಸೂರ್ಯಕುಮಾರ್ ಯಾದವ್ 2022ರಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದೀಗ 2023ನೇ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈನ ಖ್ಯಾತ ದೇವಾಲಯ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
32ರ ಹರೆಯದ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ವೈಟ್ಬಾಲ್ ಕ್ರಿಕೆಟ್ನಲ್ಲಿ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ನೀಡಿದ ಸ್ಥಿರ ಹಾಗೂ ಸ್ಪೋಟಕ ಪ್ರದರ್ಶನದಿಂದಾಗಿ ಕ್ರಿಕೆಟ್ ಲೋಕವನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಭಾರತ ತಂಡಕ್ಕೆ ಅಕ್ಷರಶಃ ಆಧಾರಸ್ಥಂಭವಾಗಿ ನಿಂತು ಬ್ಯಾಟಿಂಗ್ ನಡೆಸುವ ಮೂಲಕ ಆಸರೆಯಾಗಿದ್ದರು. ಹೀಗಾಗಿ 2023ರ ಕ್ಯಾಲೆಂಡರ್ ವರ್ಷದಲ್ಲಿಯೂ ಇಂಥಾದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
2022ರಲ್ಲಿ ಆಡಿದ 30 ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಹೆಚ್ಚು 50+ ಸ್ಕೋರ್ಗಳನ್ನು ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ 105 ಬೌಂಡರಿ ಮತ್ತು 67 ಸಿಕ್ಸರ್ಗಳನ್ನು ಬಾರಿಸಿದ್ದು, ಎರಡು ಶತಕಗಳು ಮತ್ತು ಒಂಬತ್ತು ಅರ್ಧ ಶತಕಗಳು ಸೇರಿದೆ. ಕಳೆದ ವರ್ಷ ಟಿ20 ಮಾದರಿಯಲ್ಲಿ ಒಟ್ಟು 172 ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ದಾಟಿಸಿರುವ ಸೂರ್ಯ ಚುಟುಕು ಮಾದರಿಯಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಈವರೆಗೆ 42 ಟಿ20 ಪಂದ್ಯಗಳನ್ನಾಡಿದ್ದು, 40 ಇನ್ನಿಂಗ್ಸ್ನಲ್ಲಿ 1408 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕಗಳು ಸೇರಿದ್ದು, 117 ಅತ್ಯಧಿಕ ಸ್ಕೋರ್ ಆಗಿದೆ. ಇದೇ ವೇಳೆ 12 ಅರ್ಧಶತಕ ಗಳಿಸಿದ್ದಾರೆ. ಈ ಮೂಲಕ 2022ನೇ ವರ್ಷವನ್ನು ಸೂರ್ಯಕುಮಾರ್ ಯಾದವ್ ಅತ್ಯಂತ ಸ್ಮರಣೀಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು 2023ರ ಮೊದಲ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ಗೆ ಬಿಸಿಸಿಐ ಹೊಸ ಜವಾಬ್ಧಾರಿಯೊಂದನ್ನು ನೀಡಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ ಕೊಹ್ಲಿಗೆ ವಿಶ್ರಾಂತಿ ನಿಡಲಾಗಿದ್ದು ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ಗೆ ಭಾರತ ತಂಡದ ಉಪನಾಯಕನಾಗಿ ಜವಾಬ್ಧಾರಿ ನೀಡಲಾಗಿದೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಸಜ್ಜು: ಇನ್ನು ಭಾರತ ಹಾಗೂ ಶ್ರೀಲಂಕಾ ನಡುವಿನ ವೈಟ್ಬಾಲ್ ಸರಣಿ ಜನವರಿ 3 ಮಂಗಳವಾರದಿಂದ ಆರಂಭವಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ಅಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಯೋಜನೆಯಾಗಲಿದೆ.