ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಎರಡನೇ ಟೆಸ್ಟ್ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಶುಕ್ರವಾರ (ಅ.10)ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಆಸೆ ಭಾರತ ತಂಡದ್ದಾಗಿದೆ. ಪ್ರವಾಸಿ ತಂಡ ಸಹ ಈ ಪಂದ್ಯದಲ್ಲಿ ಜಯ ಸಾಧಿಸಿ ಪುಟಿದೇಳುವ ಕನಸು ಕಾಣುತ್ತಿದೆ. ಆದರೆ ಭಾರತ ತಂಡಕ್ಕೆ ಆ ಒಂದು ಟೆನ್ಷನ್ ಆರಂಭವಾಗಿದೆ. ಆ ಚಿಂತೆ ಏನದು? ಇಲ್ಲಿದೆ ವರದಿ
ಭಾರತ ತಂಡದಲ್ಲಿ ಸದ್ಯ ಆಟಗಾರರು ಇದ್ದಾರೆ. ಆದರೂ ಸಹ ಆ ಒಂದು ಚಿಂತೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾ ಪರ ಈ ಸ್ಥಾನದಲ್ಲಿ ಸ್ಟಾರ್ ಆಟಗಾರರು ಆಡಿ ಹೆಸರು ಮಾಡಿದ್ದಾರೆ. ಈಗ ಈ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿ ಸಿಗದೆ ತಂಡ, ಚಿಂತೆಯಲ್ಲಿದೆ. 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚಿದ ಆಟಗಾರ. ಇವರ ಸ್ಥಾನವನ್ನೇ ಚೇತೇಶ್ವರ್ ಪೂಜಾರ ತುಂಬಿದ್ದರು. ಇವರು ನಿವೃತ್ತರಾದ ಬಳಿಕ ಈ ಸ್ಥಾನ ತುಂಬುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವಿರಾಟ್ ಕೊಹ್ಲಿ ತಂಡದಲ್ಲಿ ಇರುವವರೆಗೂ ಈ ಸ್ಥಾನವನ್ನು ಶುಭಮನ್ ಗಿಲ್ ಕಬ್ಜಾ ಮಾಡಿದ್ದರು. ಆದರೆ ವಿರಾಟ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ, ಗಿಲ್ ಮೂರನೇ ಸ್ಥಾನ ಬಿಟ್ಟು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಮತ್ತೆ ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿದವು. ಇಂಗ್ಲೆಂಡ್ ಪ್ರವಾಸದಲ್ಲಿ ಈ ಸ್ಥಾನದಲ್ಲಿ ಸಾಯಿ ಸುದರ್ಶನ್, ಕನ್ನಡಿಗ ಕರುಣ್ ನಾಯರ್ ಕಾಣಿಸಿಕೊಂಡರು. ಆದರೆ ಈ ಸ್ಥಾನಕ್ಕೆ ಯಾರೂ ನ್ಯಾಯ ನೀಡಲಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಇದೇ ಒಂದು ಚಿಂತೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಅಹಮದಾಬಾದ್ ಟೆಸ್ಟ್ನಲ್ಲಿ ಸಾಯಿ ಸುದರ್ಶನ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇವರು 19 ಎಸೆತಗಳಲ್ಲಿ 7 ರನ್ ಬಾರಿಸಿ ಔಟ್ ಆದರು. ಇವರ ಫಾರ್ಮ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಈಗ ಈ ಪ್ರಶ್ನೆಗಳಿಗೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಉತ್ತರಿಸಿದ್ದಾರೆ. ತಂಡದ ನಾಯಕ ಶುಭಮನ್ ಗಿಲ್ ಹಾಗೂ ಮ್ಯಾನೇಜ್ಮೆಂಟ್ಗೆ ಸಾಯಿ ಸುದರ್ಶನ್ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಸುದರ್ಶನ್ ಅವರಿಗೆ ನಮ್ಮ ಬೆಂಬಲವಿದ್ದು, ಈ ಬಗ್ಗೆ ಅವರಿಗೆ ತಿಳಿದಿದೆ. ನಾಯಕ ಹಾಗೂ ಕೋಚ್ ಸಿಬ್ಬಂದಿ ಸಹ ಅವರ ಕ್ಷಮತೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ಶೀಘ್ರದಲ್ಲೇ ತಮ್ಮ ಭರವಸೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಯಾನ್ ಟೆನ್ ಡೋಸ್ಚೇಟ್ ತಿಳಿಸಿದ್ದಾರೆ. ಸಾಯಿ ಸುದರ್ಶನ್ ಆಡಿದ 7 ಇನ್ನಿಂಗ್ಸ್ಗಳಲ್ಲಿ 21 ಸರಾಸರಿಯಲ್ಲಿ 147 ರನ್ ಗಳಿಸಿದ್ದು, ಈ ವೇಳೆ ಒಂದು ಅರ್ಧಶತಕ ಸೇರಿದೆ.