ಮುಂಬರುವ 2023ರ ಏಷ್ಯಾ ಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಸಂಭಾವ್ಯ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಇತ್ತೀಚಿನ ವರದಿಗಳ ಪ್ರಕಾರ, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್ ಮತ್ತು ಜಯದೇವ್ ಉನಾದ್ಕಟ್ ಸೇರಿದಂತೆ ಇತರರು ನಿರ್ಣಾಯಕ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಗಮನಾರ್ಹವಾಗಿ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ, ವಿಕೆಟ್ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಮತ್ತು ತಮ್ಮ ಬೆನ್ನುನೋವಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಅವರು ಪ್ರಮುಖ ಏಕದಿನ ಪಂದ್ಯಾವಳಿಗಳಿಗೆ ಮರಳಲಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಹಲವಾರು ಬದಲಾವಣೆಗಳನ್ನು ಮಾಡುವ ಬದಲು, ಭಾರತದ ಆಯ್ಕೆ ಸಮಿತಿಯು ಏಷ್ಯಾ ಕಪ್ ಮತ್ತು ವಿಶ್ವಕಪ್ ಎರಡಕ್ಕೂ ಒಂದೇ ತಂಡವನ್ನು ಆಯ್ಕೆ ಮಾಡಬಹುದು ಗಮನಾರ್ಹ ಸಂಗತಿಯಾಗಿದೆ.

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಸಂಜು ಸಾಮ್ಸನ್, ಜಯದೇವ್ ಉನಾದ್ಕಟ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್.
ಇದಲ್ಲದೆ, ಡಿಸೆಂಬರ್ 2022ರಲ್ಲಿ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಕೆ ಪ್ರಕ್ರಿಯೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೂ, ಎರಡೂ ಪಂದ್ಯಾವಳಿಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಇದೆ.
ಇದರ ಜೊತೆಗೆ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಅವರನ್ನೂ ಆಯ್ಕೆಗಾರರು ಕಡೆಗಣಿಸುವ ಸಾಧ್ಯತೆ ಇದೆ. ಶಿಖರ್ ಧವನ್ ಅಪಾರ ಅನುಭವದ ಹೊರತಾಗಿಯೂ, ಸ್ವಲ್ಪ ಸಮಯದಿಂದ ತಂಡದಿಂದ ಹೊರಗಿಡಲಾಗಿದೆ. ವರದಿಗಳ ಪ್ರಕಾರ, ಏಕದಿನ ಪಂದ್ಯಾವಳಿಗಳಿಗೆ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಕಡಿಮೆ ಸಾಧ್ಯತೆ ಇದೆ.
ಎಲ್ಲಾ ತಂಡಗಳು ಸೆಪ್ಟೆಂಬರ್ 28ರ ಮೊದಲು ಏಕದಿನ ವಿಶ್ವಕಪ್ಗಾಗಿ ತಮ್ಮ 15 ಸದಸ್ಯರ ತಂಡವನ್ನು ಅಂತಿಮಗೊಳಿಸಬೇಕು ಎಂಬುದು ಐಸಿಸಿ ಸೂಚನೆಯಾಗಿದೆ. ಇದರ ಜೊತೆಗೆ, ನಿಗದಿತ ದಿನಾಂಕವನ್ನು ಮೀರಿದ ಯಾವುದೇ ಬದಲಿ ಆಟಗಾರರಿಗೆ ಐಸಿಸಿಯಿಂದ ಅಧಿಕೃತ ಅನುಮೋದನೆಯ ಅಗತ್ಯವಿರುತ್ತದೆ.
ಭಾರತ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಬಹು ಮಾದರಿಯ ಸರಣಿಗಾಗಿ ತೆರಳಿದ್ದು, ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದುಕೊಂಡಿದ್ದು, ಇದೀಗ ಟಿ20 ಸರಣಿ ಆಡುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮುಕ್ತಾಯದ ನಂತರ, ಭಾರತ ತಂಡ 2023ರ ಏಷ್ಯಾ ಕಪ್ ಕಡೆಗೆ ಗಮನ ಹರಿಸಲಿದೆ. ಭಾರತದ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ ಟಿ20 ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಏಷ್ಯಾ ಕಪ್ ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐದು ಬಾರಿ ವಿಜೇತ ಆಸ್ಟ್ರೇಲಿಯಾ ವಿರುದ್ಧ 2023ರ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.