ವಿಶ್ವಕಪ್: ಶಿಖರ್ ಧವನ್ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

ಲಂಡನ್, ಜೂನ್ 11: ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಪ್ರಸಕ್ತ ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವರು ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇದೇ ವೇಳೆ ಧವನ್ ಅವರ ಗಾಯದ ಸಮಸ್ಯೆ ಕುರಿತಾಗಿ ಪ್ರತಿಕ್ರಿಯೆ ನಿಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಧವನ್ ಅವರನ್ನು ಈಗಲೇ ಟೂರ್ನಿಯಿಂದ ಹೊರಗೆ ಕರೆತರಲಾಗುವುದಿಲ್ಲ. ಅವರ ಸ್ಥಿತಿ ಗತಿಯ ಬಗ್ಗೆ ಕಣ್ಣಿಟ್ಟು, ಮುನ್ನೆಚರಿಕೆಯ ಕ್ರಮವಾಗಿ ಮತ್ತೊಬ್ಬ ಎಡಗೈ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರನ್ನು ಆ ಸ್ಥಾನಕ್ಕೆ ಕಾಯ್ದಿರಿಸಲಾಗುತ್ತದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
"ಗಾಯಗೊಂಡಿರುವ ಶಿಖರ್ ಧವನ್ ಅವರ ಮೇಲೆ ಬಿಸಿಸಿಐನ ವೈದ್ಯಾಧಿಕಾರಿಗಳು ಕಣ್ಣಿಟ್ಟಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಧವನ್ ಮುಂದುವರಿಯಲಿದ್ದು, ಅವರ ಚೇತರಿಕೆಯನ್ನು ಎಚ್ಚರಿಕೆಯಿಂದ ಗಮನಿಸಲಾಗುವುದು,'' ಎಂದು ಬಿಸಿಸಿಐ ಮಾಧ್ಯಮ ಗುಂಪಿನಲ್ಲಿ ತನ್ನ ಪ್ರತಿಕ್ರಿಯೆ ನೀಡಿದೆ.
"ಆಸ್ಟ್ರೇಲಿಯಾ ವಿರುದ್ಧದ ಲೀಗ್ ಪಂದ್ಯದ ವೇಳೆ ಧವನ್ ಅವರ ತೋರು ಬೆರಳು ಮತ್ತು ಹೆಬ್ಬೆರಳಿನ ಮಧ್ಯಭಾಗದಲ್ಲಿ ಗಾಯವಾಗಿದೆ,'' ಎಂದು ಬಿಸಿಸಿಐ ವಿವರಿಸಿದೆ. ಅಭ್ಯಾಸ ಪಂದ್ಯಗಳಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್, ಆಸೀಸ್ ವಿರುದ್ಧ ಪುಟಿದೆದ್ದು ಅಮೋಘ ಶತಕದ ಮೂಲಕ (109 ಎಸೆತಗಳಲ್ಲಿ 117 ರನ್) ಮ್ಯಾಚ್ ವಿನ್ನರ್ ಎನಿಸಿದ್ದರು.
ಆಸೀಸ್ಗೂ ಗಾಯದ ಬರೆ, ಸ್ಟೊಯ್ನಿಸ್ ಬದಲಿಗೆ ಮತ್ತೊಬ್ಬ ಆಲ್ರೌಂಡರ್ ಎಂಟ್ರಿ
ಆಸೀಸ್ನ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರ ಬೌನ್ಸರ್ನಲ್ಲಿ ತಮ್ಮ ಹೆಬ್ಬೆರಳಿಗೆ ಪೆಟ್ಟು ತಿಂದ ಧವನ್, ಬಳಿಕ ಕ್ಷೇತ್ರ ರಕ್ಷಣೆಗೂ ಇಳಿಯಲಿಲ್ಲ. ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಕ್ಷೇತ್ರ ರಕ್ಷಣೆಯ ಜವಾಬ್ದಾರಿ ನಿಭಾಯಿಸಿದ್ದರು.
ವರದಿಗಳ ಪ್ರಕಾರ ಧವನ್ ಅವರ ಹೆಬ್ಬೆರಳಿನ ಎಕ್ಸ್-ರೇ ನೀಡಿರುವ ವಿವರದಲ್ಲಿ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ. ಆದರೆ, ಸಿ.ಟಿ. ಸ್ಕ್ಯಾನ್ನ ವರದಿಯಲ್ಲಿ ಹೇರ್ ಲೈನ್ ಫ್ರ್ಯಾಕ್ಚರ್ ಆಗಿರುವುದು ತಿಳಿದು ಬಂದಿದೆ. ಹೀಗಾಗಿ ಹೆಚ್ಚುವರಿ ತಪಾಸಣೆ ಸಲುವಾಗಿ ಧವನ್ ಲೀಡ್ಸ್ಗೆ ಪ್ರಯಾಣ ಬೆಳೆಸಿದ್ದಾರೆ. ತಂಡ ಬದಲಿ ಆಟಗಾರನನ್ನು ಬಯಸುವುದಾದರೆ ಮೊದಲಿಗೆ ಧವನ್ ಅವರ ಗಾಯದ ಸಮಸ್ಯೆಯ ತೀವ್ರತೆ ಮತ್ತು ಅವರಿಗೆ ಚೇತರಿಸಿಕೊಳ್ಳಲು ಬೇಕಿರುವ ಸಮಯ ಎಲ್ಲವನ್ನು ಪರಿಗಣಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಕಾಯ್ದಿರಿಸಲ್ಪಟ್ಟ ಆಟಗಾರರು
ವಿಶ್ವಕಪ್ ಟೂರ್ನಿ ವೇಳೆ ತಂಡ ಗಾಯದ ಸಮಸ್ಯೆ ಎದುರಿಸಿದರೆ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಲು ಬಿಸಿಸಿಐ ಈ ಮೊದಲು ಕಾಯ್ದಿರಿಸಲ್ಪಟ್ಟ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಅನುಭವಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು, ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ವೇಗಿಗಳಾದ ಇಶಾಂತ್ ಶರ್ಮಾ ಮತ್ತು ನವದೀಪ್ ಸೈನಿ ಹಾಗೂ ಸ್ಪಿನ್ನಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ವಿಶ್ವಕಪ್ಗೆ ಕಾಯ್ದಿರಿಸಲ್ಪಟ್ಟ ಆಟಗಾರರಾಗಿದ್ದರು. ಇದೀಗ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡಿರುವ ಕಾರಣ ಮತ್ತೊಬ್ಬ ಎಡಗೈ ಆಟಗಾರ ರಿಷಭ್ ಪಂತ್ ತಂಡ ಸೇರಿಕೊಳ್ಳುವ ಮೊದಲ ಆಯ್ಕೆಯಾಗಿದ್ದಾರೆ.

ಭಾರತಕ್ಕೆ ನ್ಯೂಜಿಲೆಂಡ್ ಮುಂದಿನ ಎದುರಾಳಿ
ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 6 ವಿಕೆಟ್ಗಳ ಹೀನಾಯ ಸೋಲುಂಡಿತ್ತು. ಇದೀಗ ಲೀಗ್ ಹಂತದಲ್ಲಿನ ತನ್ನ ಮೂರನೇ ಪಂದ್ಯದಲ್ಲಿ ಗುರುವಾರ ಮತ್ತೊಮ್ಮೆ ಕಿವೀಸ್ ಸವಾಲು ಎದುರಿಸಲಿದ್ದು, ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಶಿಖರ್ ಧವನ್ ಅವರ ಸೇವೆ ಇಲ್ಲದೆ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಜೂನ್ 16ರಂದು ಇಂಡೊ-ಪಾಕ್ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಬಹುಬೇಗ ತನ್ನ ಬ್ಯಾಟಿಂಗ್ ಲೈನ್ ಅಪ್ ಸರಿಪಡಿಸಿಕೊಳ್ಳಬೇಕಿದೆ.

ಪಂತ್ ಕೆರೆತರುವಂತೆ ಸಲಹೆ
ಶಿಖರ್ ಧವನ್ ಗಾಯಗೊಂಡಿರುವ ಬೆನ್ನಲ್ಲೆ ಕೆವಿನ್ ಪೀಟರ್ಸನ್ ಹಾಗೂ ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಈ ಕೂಡಲೇ ರಿಷಭ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಕತೆತರುವಂತೆ ತಂಡದ ಮ್ಯಾನೇಜ್ಮೆಂಟ್ಗೆ ಟ್ವಿಟರ್ ಮೂಲಕ ಸಲಹೆ ನೀಡಿದ್ದಾರೆ. "ಕೆ.ಎಲ್ ರಾಹುಲ್ ಆರಂಭಿಕರಾಗಿ ಆಡಿ, ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಉತ್ತಮ,'' ಎಂದು ಪೀಟರ್ಸನ್ ಹೇಳಿದ್ದಾರೆ. ಮತ್ತೊಂದೆಡೆ ಸುನಿಲ್ ಗವಾಸ್ಕರ್ ಮಾತನಾಡಿ, "ಬದಲಿ ಆಟಗಾರನಾಗಿ ಪಂತ್ ಆಯ್ಕೆಯಾಗಬೇಕು. ಐಪಿಎಲ್ನಲ್ಲಿ ಪಂತ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೂ ಧವನ್ ಗುಣಮುಖರಾಗುವ ಸಾಶ್ಯತೆ ಇದ್ದರೆ ಪಂತ್ ತಮ್ಮ ಅವಕಾಶಕ್ಕಾಗಿ ಕಾಯಬೇಕು,'' ಎಂದಿದ್ದಾರೆ.

ಶಿಖರ್ ಧವನ್ ಒಡಿಐ ಸಾಧನೆ
130 ಪಂದ್ಯ
5480 ರನ್
143 ಗರಿಷ್ಠ
44.62 ಸರಾಸರಿ
93.79 ಸ್ಟ್ರೈಕ್ರೇಟ್
17 ಶತಕ
27 ಅರ್ಧಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications