
ಕರಾಚಿ, ಏಪ್ರಿಲ್ 2: 2005ರಲ್ಲಿ ಭಾರತಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರವಾಸ ಕೈಗೊಂಡಿದ್ದಾಗಿನ ಕ್ಷಣವನ್ನು ಪಾಕ್ ಮಾಜಿ ಆಟಗಾರ ಇನ್ಜಮಾಮ್ ಉಲ್ ಹಕ್ ನೆನಪಿಸಿಕೊಂಡಿದ್ದಾರೆ. ಅಂದು ಪ್ರವಾಸ ಬರುವಾಗ ಪಾಕ್ ತಂಡವೇಕೆ ದುರ್ಬಲವಾಗಿತ್ತು ಎನ್ನುವುದಕ್ಕೆ ಹಕ್ ಕಾರಣ ಬಾಯ್ಬಿಟ್ಟಿದ್ದಾರೆ.
2005ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಇದರಲ್ಲಿ ಪಂಜಾಬ್ನಲ್ಲಿ ನಡೆದಿದ್ದ ಆರಂಭಿಕ ಪಂದ್ಯ ಡ್ರಾ ಎನಿಸಿದ್ದರೆ, ಕೋಲ್ಕತ್ತಾದಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಭಾರತ 195 ರನ್ ಜಯ ಗಳಿಸಿತ್ತು, ಬೆಂಗಳೂರಿನಲ್ಲಿ ನಡೆದಿದ್ದ ಅಂತಿಮ ಟೆಸ್ಟ್ನಲ್ಲಿ ಪಾಕ್ ತಂಡ 168 ರನ್ ಗೆಲುವನ್ನಾಚರಿಸಿತ್ತು.
ಈ ಪ್ರವಾಸ ಸರಣಿಯಲ್ಲಿ ಬೆಂಗಳೂರಿನ ಪಂದ್ಯವನ್ನು ಇನ್ಜಮಾಮ್ ನೆನಪಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್ ಮೊದಲ ಇನ್ನಿಂಗ್ಸ್ನಲ್ಲಿ 570, ದ್ವಿತೀಯ ಇನ್ನಿಂಗ್ಸ್ನಲ್ಲಿ 261/2 ಡಿಕ್ಲೇರ್ ಘೋಷಿಸಿದ್ದರೆ, ಭಾರತ 449+214 ರನ್ ಬಾರಿಸಿ ಶರಣಾಗಿತ್ತು.
'ಆವತ್ತು ಪ್ರವಾಸ ಬರುವಾಗ ತಂಡದ ಕೆಲ ಪ್ರಮುಖ ಆಟಗಾರರು ಭಾರತಕ್ಕೆ ಪ್ರವಾಸ ಬರಲು ನಿರಾಕರಿಸಿದ್ದರು. ಹೀಗಾಗಿಯೇ ನಮ್ಮ ತಂಡ ಬಡವಾಗಿತ್ತು. ಅಲ್ಲದೆ ಬೆಂಗಳೂರು ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಡಿಕ್ಲೇರ್ ಘೋಷಿಸುವ ನಿರ್ಧಾರ ತಾಳಿ, ಸೋಲುತ್ತೇವೆ ಅಂದುಕೊಂಡಿದ್ದ ಪಂದ್ಯ ಗೆದ್ದೆವು,' ಎಂದು ಹಕ್ ಹೇಳಿದ್ದಾರೆ.
'ದ್ವಿತೀಯ ಇನ್ನಿಂಗ್ಸ್ನಲ್ಲಿ ಡಿಕ್ಲೇರ್ ಘೋಷಿಸುವ ನಿರ್ಧಾರವನ್ನು ನಾನು ಕೋಚ್ ಬಾಬ್ ವೂಲ್ಮರ್ಗೆ ರವಾನಿಸಿದೆ. ಭಾರತಕ್ಕೆ ಓವರ್ ನೀಡಲು ಬಯಸಿರುವುದಾಗಿ ಅವರಲ್ಲಿ ಹೇಳಿದೆ. ವೂಲ್ಮರ್, ಈ ನಿರ್ಧಾರವನ್ನು ಉಪ ನಾಯಕನಿಗೆ ತಿಳಿಸು ಎಂದರು. ಯೂನಿಸ್ ಖಾನ್ ಅವರು ನನ್ನ ಆಲೋಚನೆಗೆ ಒಪ್ಪಿದರು. ವೂಲ್ಮರ್ ನನ್ನ ನಿರ್ಧಾರವನ್ನು ತಪ್ಪೆಂದು ಭಾವಿಸಿದ್ದರು. ಆದರೆ ನನ್ನ ಆಲೋಚನೆ ಫಲಿಸಿತ್ತು. ನಾವು ಪಂದ್ಯ ಗೆದ್ದೆವು,' ಎಂದು ಪ್ರವಾಸ ಸರಣಿಯ ಕ್ಷಣವನ್ನು ಹಕ್ ವಿವರಿಸಿದರು.