ಪುಣೆ, ಮೇ 20: ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ವಿರುದ್ಧ ಪುಣೆಯಲ್ಲಿ ನಡೆಯಲಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಚೆನ್ನೈ ತಂಡ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ ಆದರೆ ಪಂಜಾಬ್ ತಂಡ ಪ್ಲೇ ಆಫ್ ತಲುಪಲು ಕಷ್ಟ ಪಡುತ್ತಿದ್ದು, ಅದು ಈಗ ಪವಾಡ ನಿರೀಕ್ಷೆಯಲ್ಲಿದೆ.
ಇಂದು ನಡೆಯುವ ಪಂದ್ಯದಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದರೆ ಹಾಗೂ ಆ ನಂತರವೂ ಉಳಿದ ತಂಡಗಳ ರನ್ರೇಟ್ ಲೆಕ್ಕ ಹಾಕಿದ ತರುವಾಯ ಪಂಜಾಬ್ಗೆ ಪ್ಲೇ ಆಫ್ ಗೆ ಪ್ರವೇಶಿಸುವ ಅವಕಾಶ ಸಿಗಲಿದೆ ಆದರೆ ಇದು ಕಷ್ಟ ಸಾಧ್ಯ.
ಒಂದು ವೇಳೆ ಪಂಜಾಬ್ನ ಕ್ರಿಸ್ ಗೇಲ್, ಕೆ,ಎಲ್.ರಾಹುಲ್, ಕರಣ್ ನಾಯರ್, ಯುವರಾಜ್ ಸಿಡಿದು ನಿಂತರೆ ಮಾತ್ರವೇ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ ಇಲ್ಲವಾದರೆ ಪೆಚ್ಚು ಮೋರೆ ಹಾಕಿ ಟೂರ್ನಿಯಿಂದ ಹೊರ ನಡೆಯಬೇಕಾಗುತ್ತದೆ.
ಮತ್ತೊಂದೆಡೆ ಚೆನ್ನೈ ತಂಡ ಈ ಪಂದ್ಯವನ್ನು ಗೆದ್ದು ರನ್ರೇಟ್ ಉತ್ತಮ ಪಡಿಸಿಕೊಂಡು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಪ್ರಯತ್ನಿಸಲಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಸೋತು ಅನುಭವಿಸಿರುವ ನಷ್ಟವನ್ನು ಈ ಪಂದ್ಯದ ಮೂಲಕ ತುಂಬಿಕೊಳ್ಳುವ ಉಮೇದಿನಲ್ಲಿ ಚೆನ್ನೈ ತಂಡ ಇದೆ.
ಚೆನ್ನೈ ತಂಡಕ್ಕೆ ಇದೊಂದು ಔಪಚಾರಿಕ ಪಂದ್ಯವಾಗಿದ್ದರೆ ಪಂಜಾಬ್ಗೆ ಮಾಡಲೇ ಬೇಕಾದ ಪಂದ್ಯ ಹಾಗಾಗಿ ಪಂಜಾಬ್ ಆಟಗಾರರ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದ್ದು, ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಕರಣ್ ನಾಯರ್ ಮೇಲೆ ಪಂಜಾಬ್ ಅಭಿಮಾನಿಗಳು ಹೆಚ್ಚು ಭರವಸೆ ಇಟ್ಟಿದ್ದಾರೆ.