
ಚೆನ್ನೈ, ಜನವರಿ 08: ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜರನ್ನು ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಸ್ಫೋಟಕ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮೇಲೆ ಕಣ್ಣು ಹಾಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಹರಾಜಿನಲ್ಲಿ ಕೆಕೆಆರ್ ನಿಂದ ಪರಿತ್ಯಕ್ತರಾದ ಗಂಭೀರ್ ಅವರನ್ನು ಸಿಎಸ್ ಕೆ ಖರೀದಿಸುವ ಸಾಧ್ಯತೆ ಹೆಚ್ಚಿದೆ.
ಜನವರಿ 04ರಂದು ನಡೆದ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ತಂಡದ ನಾಯಕ ಗೌತಮ್ ಗಂಭೀರ್ ರನ್ನೇ ತಂಡದಿಂದ ಕೈ ಬಿಟ್ಟು ಅಚ್ಚರಿ ಮೂಡಿಸಿತ್ತು. ಬದಲಿದೆ ಅಲ್ ರೌಂಡರ್ ಸುನೀಲ್ ನಾರಾಯಣ್ ಹಾಗೂ ಆಂಡ್ರೆ ರಸೆಲ್ ರನ್ನು ಉಳಿಸಿಕೊಂಡಿತ್ತು.
ಹರಾಜಿಗೆ ಹಣ ಉಳಿಸಲು ಈ ಕ್ರಮ ಕೈಗೊಂಡಿದ್ದಾರೆ ಎಂಬ ಸುದ್ದಿಯಿದೆ. ಸುನೀಲ್ ನಾರಾಯಣ್ ಗೆ 12.5 ಕೋಟಿ ರು ಹಾಗೂ ರಸೆಲ್ ಗೆ 8.5 ಕೋಟಿ ರು, ಒಟ್ಟು 21 ಕೋಟಿ ರು ನೀಡಿ ಇಬ್ಬರು ಉಳಿಸಿಕೊಳ್ಳಲಾಗಿದೆ. ಕೆಕೆಆರ್ ಬಳಿ ಇನ್ನೂ 59 ಕೋಟಿ ರು ಇದ್ದು, ಹರಾಜಿನಲ್ಲಿ ಬಳಸಬಹುದಾಗಿದೆ.
ಆದರೆ, ಗೌತಮ್ ಅವರನ್ನು ಹರಾಜಿನ ಮೂಲಕ ಖರೀದಿಸಲು ಕೆಕೆಆರ್ ಸೇರಿದಂತೆ ಉಳಿದ ತಂಡಗಳಿಗೂ ಅವಕಾಶಗಳಿವೆ. ಎರಡು ಬಾರಿ ಐಪಿಎಲ್ ಚಾಂಪಿಯನ್ ತಂಡವನ್ನು ಮುನ್ನಡೆಸಿದ ಗಂಭೀರ್ ಅವರನ್ನು ಖರೀದಿಸಲು ಚೆನ್ನೈ ತಂಡ ಉತ್ಸುಕವಾಗಿದ್ದು ಜನವರಿ 27 ಹಾಗೂ 28ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ನಿಂದ ಯಾವುದೇ ಅಧಿಕೃತ ಮಾಹಿತಿ ಸಿಗದಿದ್ದರೂ, ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು ಈ ರೀತಿ ಸುದ್ದಿಯಿದೆ ಎಂದು ಮಾಡಿದ ಟ್ವೀಟ್ ಗೆ ಸ್ಮೈಲಿಗಳ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕೃತ ಟ್ವೀಟ್ ಖಾತೆಯಿಂದ ಉತ್ತರ ಸಿಕ್ಕಿದೆ.