
ಹೈದರಾಬಾದ್, ಮಾರ್ಚ್ 28: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಡೇವಿಡ್ ವಾರ್ನರ್ ಅವರು ಐಪಿಎಲ್ 2018ರ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿದ್ದ ವಾರ್ನರ್ ಅವರು ಇತ್ತೀಚಿನ ಬೆಳವಣಿಗೆಗಳ ಹಿನ್ನಲೆಯಲ್ಲಿ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೊಸ ನಾಯಕ ಯಾರು ಎಂಬುದನ್ನು ಸದ್ಯದಲ್ಲೆ ಪ್ರಕಟಿಸುತ್ತೇವೆ ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕೆ ಷಣ್ಮುಗಂ ಅವರು ಮಂಗಳವಾರದಂದು ಪ್ರಕಟಿಸಿದ್ದಾರೆ.
ಮತ್ತೊಬ್ಬ ಆರೋಪಿ ಸ್ಟೀವ್ ಸ್ಮಿತ್ ಅವರು ಆಸ್ಟ್ರೇಲಿಯಾದ ನಾಯಕತ್ವ ಹಾಗೂ ಐಪಿಎಲ್ 2018ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಡೇವಿಡ್ ವಾರ್ನರ್ ಅವರು ಆಸ್ಟ್ರೇಲಿಯಾದ ಉಪ ನಾಯಕತ್ವವನ್ನು ತೊರೆದಿದ್ದಾರೆ. ಸ್ಮಿತ್, ವಾರ್ನರ್ ಹಾಗೂ ಬಾನ್ ಕ್ರಾಫ್ಟ್ ಮೂವರು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿದ್ದು, ಬದಲಿ ಆಟಗಾರರನ್ನು ಹೆಸರಿಸಲಾಗಿದೆ. ಆದರೆ, ತಂಡದ ಕೋಚ್ ಡರೇನ್ ಲೆಹ್ಮನ್ ಅವರು ಮಾತ್ರ ಶಿಕ್ಷೆಯಿಂದ ಬಚಾವಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಸಣ್ಣ ಚಿಪ್ ಬಳಸಿ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಸಮಿತಿ ಕ್ರಮ ಜರುಗಿಸಿದೆ. ಆದರೆ, ಸ್ಟೀವ್ ಸ್ಮಿತ್ ಪ್ರತಿಕ್ರಿಯಿಸಿ, ಇದರಲ್ಲಿ ಕೋಚ್ಗಳ ಪಾತ್ರವಿಲ್ಲ. ಆಟಗಾರರು ಮಾತ್ರವೇ ಇದರಲ್ಲಿದ್ದಾರೆ. ಬ್ಯಾಂಕ್ರಾಫ್ಟ್ ವರ್ತನೆಗೆ ವಿಷಾದವಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ