
ಬೆಂಗಳೂರು, ಏಪ್ರಿಲ್ 12: ವರುಣದ ಆಟದ ನಡುವೆಯೂ ಉತ್ತಮ ಆಟವಾಡಿದ ರಾಜಸ್ತಾನ ರಾಯಲ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಮೊದಲ ಗೆಲುವಿನ ರುಚಿ ಸವಿಯಿತು.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ನೇತೃತ್ವದ ತಂಡ ಡಕ್ವರ್ಥ್ ಲೂಯಿಸ್ ನಿಯಮದಡಿ 10 ರನ್ಗಳಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿತು.
ನಿಷೇಧದ ಬಳಿಕ ಮತ್ತೆ ಮರಳಿರುವ ರಾಜಸ್ಥಾನ ರಾಯಲ್ಸ್ ತಂಡ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಕಂಡಿತ್ತು.
ಮಳೆಯ ಕಾರಣ ಆಟ ನಿಂತಾಗ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ಗಳ ಆಟವನ್ನು ಪೂರ್ಣಗೊಳಿಸಿರಲಿಲ್ಲ. ಮಳೆ ನಿಂತು ಮತ್ತೆ ಪಂದ್ಯ ಆರಂಭವಾಗುವುದು ತಡವಾಗಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಡಿ ದೆಹಲಿ ತಂಡಕ್ಕೆ 6 ಓವರ್ಗಳಲ್ಲಿ 71 ರನ್ಗಳ ಗುರಿ ನಿಗದಿಪಡಿಸಲಾಯಿತು.

ಮೊದಲ ಬಾಲ್ನಲ್ಲಿಯೇ ವಿಕೆಟ್ ಕಳೆದುಕೊಂಡ ದೆಹಲಿ ತಂಡ, ನಿರೀಕ್ಷೆಗೆ ತಕ್ಕಂತೆ ವೇಗದ ಗತಿಯಲ್ಲಿ ರನ್ ಗಳಿಸುವಲ್ಲಿ ವಿಫಲವಾಯಿತು. ರಾಜಸ್ಥಾನ ರಾಯಲ್ಸ್ ಬೌಲರ್ಗಳು ಎದುರಾಳಿಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಹೆಚ್ಚು ಅವಕಾಶ ನೀಡಲಿಲ್ಲ. ಹೀಗಾಗಿ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ.
71 ರನ್ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡ, ಪ್ರತಿ ಓವರ್ನಲ್ಲಿ ಸರಾಸರಿ 12 ರನ್ ಗಳಿಸಬೇಕಿತ್ತು. ಆರಂಭಿಕ ಆಟಗಾರ ಕಾಲಿನ್ ಮುನ್ರೊ ಒಂದೂ ಎಸೆತ ಎದುರಿಸದೆಯೇ ರನ್ಔಟ್ ಆದರು.
ಮೊದಲ ಓವರ್ ಮಾಡಿದ ಕರ್ನಾಟಕದ ಕೆ. ಗೌತಮ್ ಅವರ ಮೊದಲ ಎಸೆತದಲ್ಲಿ ರನ್ ಕದಿಯುವ ವೇಳೆ ಮತ್ತೊಬ್ಬ ಆರಂಭಿಕ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮುನ್ರೊ ಗೊಂದಲಕ್ಕೊಳಗಾದರು. ಮೊದಲ ಓವರ್ನಲ್ಲಿ ಗೌತಮ್, 10 ರನ್ ಮಾತ್ರ ನೀಡಿದರು.
ಎರಡನೆಯ ಓವರ್ನಲ್ಲಿ ಧವಳ್ ಕುಲಕರ್ಣಿ ಕೇವಲ 4 ರನ್ ನೀಡುವ ಮೂಲಕ ದೆಹಲಿ ತಂಡದ ಮೇಲೆ ಒತ್ತಡ ಹೇರಿದರು. ಮೂರನೇ ಓವರ್ ಬೌಲ್ ಮಾಡಿದ ಜಯದೇವ್ ಉನದ್ಕತ್ ಅವರ ಮೂರು ಎಸೆತಗಳಲ್ಲಿ ರನ್ ಗಳಿಸುವಲ್ಲಿ ಮ್ಯಾಕ್ಸ್ವೆಲ್ ವಿಫಲರಾದರು. ಆದರೆ ಕೊನೆಯ ಮೂರು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸಹಿತ 14 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಕುತೂಹಲ ಘಟಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದರು.

ನಾಲ್ಕನೆಯ ಓವರ್ನಲ್ಲಿ ಬೆನ್ ಲಾಫ್ಲಿನ್, ಮ್ಯಾಕ್ಸ್ವೆಲ್ ವಿಕೆಟ್ ಕಬಳಿಸಿದ್ದಲ್ಲದೆ, ಕೇವಲ ಏಳು ರನ್ ನೀಡಿದರು. ತುಸು ಪ್ರತಿರೋಧ ತೋರಿದ ರಿಷಬ್ ಪಂಥ್ ಅವರಿಗೆ ಉನದ್ಕತ್ ಪೆವಿಲಿಯನ್ ಹಾದಿ ತೋರಿಸಿದರು.
ದೆಹಲಿ ತಂಡಕ್ಕೆ ಕೊನೆಯ ಓವರ್ನಲ್ಲಿ 25 ರನ್ಗಳ ಅವಶ್ಯಕತೆಯಿತ್ತು. ಲಾಫ್ಲಿನ್ 14 ರನ್ ಮಾತ್ರ ನೀಡಿದರು.
ಆರಂಭದಲ್ಲಿ ಎಡವಿದ ರಾಯಲ್ಸ್
ರಾಜಸ್ಥಾನ ರಾಯಲ್ಸ್ ತಂಡದ ಆರಂಭವೂ ಅಷ್ಟೇನೂ ಚೆನ್ನಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ರನೌಟ್ ಆಗಿದ್ದ ಡೇವಿಡ್ ಶಾರ್ಟ್, ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರು.
ನಾಯಕ ಅಜಿಂಕ್ಯಾ ರಹಾನೆ ರನ್ ಗತಿಯ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾದರು. ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ನಡೆಸಿದ್ದರಿಂದ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿದರು.
17.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಸಂಜು ಸ್ಯಾಮ್ಸನ್ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು.
ಇದು ದೆಹಲಿ ತಂಡಕ್ಕೆ ಸತತ ಎರಡನೆಯ ಸೋಲಾಗಿದ್ದು, ಪಟ್ಟಿಯಲ್ಲಿ ಅಂಕ ತೆರೆಯುವಲ್ಲಿ ವಿಫಲವಾಗಿದೆ.