
ಬೆಂಗಳೂರು, ಏಪ್ರಿಲ್ 22: ಐಪಿಎಲ್ 2019ರ ಆರಂಭಿಕ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ತಂಡದ ವಿಕೆಟ್ ಕೀಪರ್ ಕಮ್ ಓಪನರ್ ಪಾರ್ಥಿವ್ ಪಟೇಲ್, ಕೊನೆಯ ಎಸೆತವನ್ನು ಎಂಎಸ್ ಧೋನಿ ಮಿಸ್ ಮಾಡಿಕೊಳ್ಳೋದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು, ತಂಡದ ನಾಯಕ ಧೋನಿ ಕೈ ಚೆಲ್ಲಿದ ಆ ಅಂತಿಮ ಎಸೆತವನ್ನೇ ಅವಲಂಭಿಸಿತ್ತು. ಧೋನಿಯೇನಾದರೂ ಆ ಎಸೆತಕ್ಕೆ 2 ರನ್ ಪಡೆದಿದ್ದರೆ ಸಿಎಸ್ಕೆ ಜಯಿಸುತ್ತಿತ್ತು. ಒಂದೇ ರನ್ ಬಂದಿದ್ದರೂ ಪಂದ್ಯ ಸೂಪರ್ ಓವರ್ನತ್ತ ತಿರುಗುತ್ತಿತ್ತು.
ಆದರೆ ಅಂತಿಮ ಎಸೆತವನ್ನು ಧೋನಿ ಡಾಟ್ ಅನ್ನಿಸಿ ಒಂದು ರನ್ಗಾಗಿ ಯತ್ನಿಸಿದರಾದರೂ ಶಾರ್ದೂಲ್ ಠಾಕೂರ್ ಆಚೆ ಕ್ರೀಸ್ ತಲುಪೋದಕ್ಕೂ ಮುನ್ನ ಪಾರ್ಥಿವ್ ಪಟೇಲ್ ಕೈ ಸೇರಿದ್ದ ಚೆಂಡನ್ನು ವಿಕೆಟ್ಗೆ ಗುರಿಯಿಟ್ಟಿದ್ದರು. ಅಲ್ಲಿಗೆ ಅಂತಿಮ ಎಸೆತದಲ್ಲಿ ಒಂದೂ ರನ್ ಬಾರದೆ ಸಿಎಸ್ಕೆ ಕೇವಲ 1 ರನ್ನಿಂದ ಶರಣಾಯಿತು.
'ನಿಜವಾಗಿಯೂ ನಾವು ಧೋನಿ ಕೊನೆಯ ಎಸೆತಕ್ಕೆ ಆಫ್ ಸೈಡ್ಗೆ ಅಥವಾ ಲೆಗ್ ಸೈಡ್ಗೆ ಹೊಡೆದು 2 ರನ್ ಗಳಿಸುತ್ತಾರೆ ಎಂಬುದನ್ನು ನಿರೀಕ್ಷಿಸಿದ್ದೆವು. ಹಾಗಂತ ಆ 2 ರನ್ ತಡೆಯುವ ಸಾಧ್ಯತೆಯೂ ಇರಲಿಲ್ಲವೆಂದಲ್ಲ' ಎಂದು ಪಟೇಲ್ ಪಂದ್ಯದ ಬಳಿಕ ಹೇಳಿದ್ದಾರೆ. ಅಂತಿಮ ಓವರ್ನ ಮೊದಲ 5 ಎಸೆತಗಳಲ್ಲಿ ಧೋನಿ 24 ರನ್ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದಿದ್ದರು. ಧೋನಿ ಒಟ್ಟು 48 ಎಸೆತಗಳಿಗೆ 84 ರನ್ ಬಾರಿಸಿದ್ದರು.