
ಮುಂಬೈ, ಮಾರ್ಚ್ 13: ಕೆಳಬೆನ್ನು ನೋವಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಮತ್ತು ಸದ್ಯ ನಡೆಯುತ್ತಿರುವ ಏಕದಿನ ಸರಣಿಯಿಂದ ಹೊರ ಬಿದ್ದಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರಕ್ಕೆ ಹಾಜರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮೂರುಬಾರಿ ಚಾಂಪಿಯನ್ ಎನಿಸಿಕೊಂಡಿರುವ ಬಲಿಷ್ಟ ತಂಡ ಮುಂಬೈ ಇಂಡಿಯನ್ಸ್, ಸೀಸನ್ ಆರಂಭಕ್ಕೂ ಮುನ್ನ ಮಂಗಳವಾರ (ಮಾರ್ಚ್ 12) ಅಭ್ಯಾಸ ಕ್ಯಾಂಪ್ ಆರಂಭಿಸಿದೆ. ಇದರಲ್ಲಿ ಪಾಂಡ್ಯ ಪಾಲ್ಗೊಂಡಿದ್ದಾರೆ. ಮುಂಬೈಯ ಘನ್ಸೋಲಿಯಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಅಭ್ಯಾಸ ಶಿಬಿರ ನಡೆಯುತ್ತಿದೆ.
ಅಭ್ಯಾಸದಲ್ಲಿ ಪಾಲ್ಗೊಂಡಿರುವ ಹಾರ್ದಿಕ್, ಶಕ್ತಿ ಸಹಿಷ್ಣುತೆ ತರಬೇತಿ (Strength Endurance Training) ನಡೆಸಿದ್ದಾರೆ ಎಂದು ಮುಂಬೈ ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾ-ಭಾರತ ವಿರುದ್ಧ ಏಕದಿನ ಸರಣಿಯ ವೇಳೆ ಪಾಂಡ್ಯ ಚೇತರಿಸಿಕೊಳ್ಳದ್ದರಿಂದ ಅವರ ಸ್ಥಾನಕ್ಕೆ ಆರ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಕರೆತರಲಾಗಿತ್ತು.
ಐಪಿಎಲ್ 12ನೇ ಆವೃತ್ತಿಯು ಮಾರ್ಚ್ 23ರಿಂದ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 8 pmಗೆ ಶುರುವಾಗಲಿದೆ.