

ನವದೆಹಲಿ, ಮಾರ್ಚ್ 25: ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್, ಅಪಾಯಕಾರಿ ಆಟಗಾರ ಅನ್ನಿಸಿಕೊಂಡಿದ್ದ ಯುವರಾಜ್ ಸಿಂಗ್ ಅವರ ವೃತ್ತಿ ಭವಿಷ್ಯದ ಬಗ್ಗೆಯೇ ಕ್ರಿಕೆಟ್ ವಲಯದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಯುವಿ, ಆಟ ನಿಲ್ಲಿಸಬೇಕು ಅನ್ನಿಸಿದಾಗ, ಕಾಲ ಬಂದಾಗ ಆಡೋದು ನಿಲ್ಲಿಸಿಬಿಡುತ್ತೇನೆ ಎಂದಿದ್ದಾರೆ.
ಮುಂಬೈಯ ವಾಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 25) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕ್ರಿಕೆಟ್ ಅಭಿಮಾನಿಗಳು ಯುವಿಯ ಇಂಥ ಬ್ಯಾಟಿಂಗ್ ನೋಡದೆ ಎಷ್ಟೋ ವರ್ಷಗಳಾಗಿದ್ದವು.
ಐಪಿಎಲ್ 3ನೇ ಪಂದ್ಯದಲ್ಲಿ ಮುಂಬೈ ಪ್ರತಿನಿಧಿಸಿದ್ದ ಯುವಿ 35 ಎಸೆತಗಳಿಗೆ 53 ರನ್ ಬಾರಿಸಿದ್ದರು. ಇದು ಐಪಿಎಲ್ನಲ್ಲಿ ಯುವರಾಜ್ ಬಾರಿಸಿದ 13ನೇ ಅರ್ಧಶತಕ. ಆದರೆ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 37 ರನ್ಗಳಿಂದ ಗೆದ್ದುಕೊಂಡಿತು.
ಪಂದ್ಯದ ಬಳಿಕ ಮಾತನಾಡಿದ ಕೆಚ್ಚೆದೆಯ ಮಹಾರಾಜ, 'ಕಾಲ ಬಂದಾಗ ಆಟ ನಿಲ್ಲಿಸುತ್ತೇನೆ (ನಿವೃತ್ತಿ ಘೋಷಿಸುತ್ತೇನೆ)' ಎಂದು ಹೇಳಿದ್ದಾರೆ. ಈಗ ಯುವಿ ಟೀಮ್ ಇಂಡಿಯಾದಲ್ಲಿ ಯಾವುದೇ ಕ್ರಿಕೆಟ್ ಮಾದರಿಯಲ್ಲಿ ಆಡುತ್ತಿಲ್ಲ. ಆದರೆ ಸಿಂಗ್, 2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಹೀರೋ ಅನ್ನೋದು ಉಲ್ಲೇಖನೀಯ.