
ಬೆಂಗಳೂರು, ಏಪ್ರಿಲ್ 25: ಐಪಿಎಲ್ 12ನೇ ಆವೃತ್ತಿಯಲ್ಲಿ ಅಂಪೈರ್ಗಳ ಪ್ರಮಾದ ಮುಂದುವರಿಯುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ನಡುವಣ ಪಂದ್ಯದಲ್ಲಿ ಅಂಪೈರ್ ಶಾಮ್ಸುದ್ದೀನ್ ಎಲ್ಲರ ಗಮನದ ಕೇಂದ್ರಬಿಂದುವಾಗಿದ್ದರು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಮೊದಲು ಬ್ಯಾಟ್ ಮಾಡಿತ್ತು. ಈ ಸಂದರ್ಭದಲ್ಲಿ 13ನೇ ಓವರ್ ಮುಕ್ತಾಯದ ಬಳಿಕ ಚೆಂಡನ್ನು ತೆಗೆದು ಜೇಬಿನಲ್ಲಿ ಇರಿಸಿದ್ದ ಅಂಪೈರ್ ಶಾಮ್ಸುದ್ದೀನ್, ಸ್ಟ್ರಾಟೆಜಿಕ್ ಟೈಮ್ ಔಟ್ ವಿರಾಮದ ನಂತರ ಚೆಂಡು ಎಲ್ಲಿಟ್ಟಿದ್ದೇನೆ ಎಂಬುದನ್ನೇ ಮರೆತುಬಿಟ್ಟಿದ್ದರು.
ವಿರಾಮದ ನಂತರ ಬೌಲಿಂಗ್ ನಡೆಸಲು ಮುಂದಾದ ಅಂಕಿತ್ ರಜಪೂರ್ ಮತ್ತು ಕಿಂಗ್ಸ್ ಇಲೆವೆನ್ ನಾಯಕ ಆರ್. ಅಶ್ವಿನ್ ಚೆಂಡಿಗಾಗಿ ಹುಡುಕಾಟ ನಡೆಸಿದರು. ಹೀಗಾಗಿ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಅಶ್ವಿನ್ ಶಾಮ್ಸುದ್ದೀನ್ ಬಳಿ ಕೆಲ ಹೊತ್ತು ಚರ್ಚಿಸಿದರಾದರೂ ಚೆಂಡನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಅಂಪೈರ್ ಬ್ರೂಸ್ ಆಕ್ಸೆನ್ಫೋರ್ಡ್ ಕೂಡ ಚೆಂಡಿಗಾಗಿ ಹುಡುಕಾಟ ನಡೆಸಿ ಕಡೆಗೆ ಹೊಸ ಚೆಂಡನ್ನು ತರೆಸಲು ಮುಂದಾದರು.
ಆದರೆ, ಟೆಲಿವಿಷನ್ ರೀಪ್ಲೇಯಲ್ಲಿ ಸ್ಟ್ರಾಟೆಜಿಕ್ ಟೈಮ್ ಔಟ್ ವಿರಾಮಕ್ಕೂ ಮೊದಲು ಅಂಪೈರ್ ಶಾಮ್ಸುದ್ದೀನ್ ಚೆಂಡನ್ನು ಜೇಬಿನಲ್ಲಿ ಇರಿಸಿರುವುದು ಕಂಡುಬಂದಿತು.
ಚೆಂಡನ್ನು ಜೇಬಲ್ಲಿಟ್ಟು ಬೇರೆಡೆ ಹುಡುಕುತ್ತಿದ್ದ ಅಂಪೈರ್ ಶಾಮ್ಸುದ್ದೀನ್ ಪಜೀತಿ ಕಂಡು ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರೆಲ್ಲಾ ಗಹಗಹನೆ ನಕ್ಕು ಸುಮ್ಮನಾದರು. ಕ್ರೀಸ್ನಲ್ಲಿದ್ದ ಎಬಿ ಡಿ'ವಿಲಿಯರ್ಸ್ ಮುಖದಲ್ಲೂ ಕೆಲಕಾಲ ಮಂದಹಾಸ ಮೂಡಿತ್ತು.
ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ವಿರುದ್ಧ 17 ರನ್ ಜಯ ದಾಖಲಿಸಿತು. ಇದರೊಂದಿಗೆ ಸತತ 3 ಗೆಲುವು ದಾಖಲಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ ಮೊದಲ ಬಾರಿ ಒಂದು ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದುಕೊಂಡಿದೆ.
ಆರಂಭದಲ್ಲಿ ಸತತ 6 ಪಂದ್ಯಗಳನ್ನು ಸೋತ ಚಾಲೆಂಜರ್ಸ್ ಇದೀಗ ಕಳೆದ 5 ಪಂದ್ಯಗಳಲ್ಲಿ 4 ಜಯ ಮತ್ತು 1 ಸೋಲುಂಡಿದ್ದು ಪ್ಲೇ ಆಫ್ಸ್ ತಲುಪುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.