
ಬೆಂಗಳೂರು, ಫೆಬ್ರವರಿ 23: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆವೃತ್ತಿ ಅದ್ದೂರಿ ಆರಂಭೋತ್ಸವ ಇಲ್ಲದೆ ಚಾಲನೆಗೊಳ್ಳಲಿದೆ. ಆರಂಭೋತ್ಸವಕ್ಕೆ ಬೀಳುವ ಖರ್ಚಿನ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೀಡಲು ಬಿಸಿಸಿಐ ನಿರ್ಧರಿಸಿರುವುದು ಇದಕ್ಕೆ ಕಾರಣ.
ಪ್ರತಿಬಾರಿ ಐಪಿಎಲ್ ಆರಂಭವಾಗುವಾಗಲೂ ಆರಂಭೋತ್ಸವವನ್ನು ಬಲು ಅದ್ದೂರಿಯಾಗಿ ನಡೆಸಲಾಗುತ್ತಿತ್ತು. ಉದ್ಘಾಟನಾ ಸಮಾರಂಭದ ದಿನ ಕ್ರಿಕೆಟ್, ಸಿನಿಮಾ, ಸಂಗೀತ ತಾರೆಯರಿಂದ ವರ್ಣರಂಜಿತ ಸಭಾಂಗಣದಲ್ಲಿ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾಮಾನ್ಯವಾಗಿತ್ತು. ಆದರೆ 12ನೇ ಆವೃತ್ತಿಯ ಐಪಿಎಲ್ ಟೂರ್ನಿ ಅದ್ದೂರಿ ಆರಂಭೋತ್ಸವ ಇಲ್ಲದೆ ಶುರುವಾಗಲಿದೆ.
'ಈ ಬಾರಿಯ ಐಪಿಎಲ್ಗೆ ಉದ್ಘಾಟನೆ ಕಾರ್ಯಕ್ರಮವಿಲ್ಲ. ಆರಂಭೋತ್ಸವಕ್ಕೆ ಬೀಳುವ ಖರ್ಚಿನ ಹಣವನ್ನು ಪುಲ್ವಾಮ ದಾಳಿಯಲ್ಲಿ ಮೃತರಾದ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ. ಕಳೆದ ಐಪಿಎಲ್ ಸೀಸನ್ ಆರಂಭೋತ್ಸವಕ್ಕೆ ಸುಮಾರು 15 ಕೋ.ರೂ.ಗಳು ಖರ್ಚಾಗಿತ್ತು.
12ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 23ರಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯ ಚೆನ್ನೈಯಲ್ಲಿ ನಡೆಯಲಿದ್ದು, ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸವಾಲು ಸ್ವೀಕರಿಸಲಿವೆ.