
ಕೋಲ್ಕತ್ತಾ, ಮಾರ್ಚ್ 27: ಕ್ರಿಕೆಟ್ ವಲಯದಲ್ಲಿ ಸದ್ಯ ತೀವ್ರ ಚರ್ಚೆಗೀಡಾಗಿರುವ ಆರ್ ಅಶ್ವಿನ್ ಅವರ ಮಂಕಡಿಂಗ್ ಪ್ರಕರಣವನ್ನು ಕೋಲ್ಕತ್ತಾ ಪೊಲೀಸ್ ಎತ್ತಿಕೊಂಡಿದ್ದಾರೆ. ಬಿಸಿಸಿಐಯೋ ಇಲ್ಲ ಐಸಿಸಿಯೋ ಕೈಗೆತ್ತಿಕೊಳ್ಳಬೇಕಾದ ವಿಚಾರವನ್ನು ಕೋಲ್ಕತ್ತಾ ಪೊಲೀಸರ್ಯಾಕೆ ಎತ್ತಿಕೊಂಡರಪ್ಪ ಅಂತ ಗಲಿಬಿಲಿಗೊಳ್ಳಬೇಡಿ. ಅಮೂಲ್ಯ ಸಂದೇಶ ರವಾನಿಸುವ ಸಲುವಾಗಿ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರು ಎತ್ತಿಕೊಂಡಿರುವುದು ನಿಜವೆ.
ಸೋಮವಾರ (ಮಾರ್ಚ್ 25) ಜೈಪುರ್ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ್ vs ಪಂಜಾಬ್ ನಡುವಿನ ಐಪಿಎಲ್ 4ನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ ತಂಡವನ್ನು ಗೆಲುವಿನ ದಡ ಮುಟ್ಟಿಸುವುದರಲ್ಲಿದ್ದ ಜಾಸ್ ಬಟ್ಲರ್ ಅವರನ್ನು ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಅವರು ಮಂಕಡ್ ರನೌಟ್ ಮೂಲಕ ಪೆವಿಲಿಯನ್ಗೆ ಅಟ್ಟಿದ್ದರು. ಪರಿಣಾಮ ರಾಜಸ್ಥಾನ ಪಂದ್ಯವನ್ನು ಸೋತಿತ್ತು.
ಅಶ್ವಿನ್ ಅವರು ಎಚ್ಚರಿಕೆ ನೀಡದೆ ನಿಷ್ಟುರವಾಗಿ ಸೀದಾ ಬಟ್ಲರ್ ಅವರನ್ನು ಔಟ್ ಮಾಡಿದ ಬಗೆ ಕೆಲ ಕ್ರಿಕೆಟ್ ದಿಗ್ಗಜರಿಗೆ ಮತ್ತು ಅಭಿಮಾನಿಗಳಿಗೆ ಸರಿ ಕಂಡಿಲ್ಲ. ಈ ವಿವಾದವೀಗಲೂ ಚರ್ಚೆಯಾಗುತ್ತಲೇ ಇದೆ. ಆದರೇನಂತೆ ಜನರಿಗೆ ಅಮೂಲ್ಯ ಸಂದೇಶ ರವಾನಿಸಲು ಪೊಲೀಸರಿಗೆ ಈ ಮಂಕಡೆಡ್ ಪ್ರಕರಣ ಒಂದು ಚಂದದ ನೆಪವಾಗಿದೆ.
ಕೋಲ್ಕತ್ತಾ ಪೊಲೀಸ್ ಅಧಿಕೃತ ಟ್ವಿಟರ್ ಅಕೌಂಟ್ನಿಂದ ಒಂದು ಟ್ವೀಟ್ ಮಾಡಲಾಗಿದೆ. ಇದರಲ್ಲಿ ಒಂದೆಡೆ ಟ್ರಾಫಿಕ್ ಸಿಗ್ನಲ್ ಬಳಿ ವಾಹನಗಳು ಟ್ರಾಫಿಕ್ ಲೈನ್ ದಾಟಿರುವ ಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಅಶ್ವಿನ್-ಬಟ್ಲರ್ ಮಂಕಡಿಂಗ್ ಕ್ಷಣದ ಚಿತ್ರವಿದೆ.
ಟ್ವಿಟರ್ ಚಿತ್ರದ ಜೊತೆಗೆ ಕೋಲ್ಕತ್ತಾ ಪೊಲೀಸರು ಸಾಲೊಂದನ್ನೂ ಸೇರಿಸಿದ್ದಾರೆ. ಸಾಲಿನಲ್ಲಿ, 'ಕ್ರೀಸ್ ಅಥವಾ ರೋಡ್ ಏನೇ ಇರಲಿ, ಒಟ್ಟಿನಲ್ಲಿ ನೀವು ಗೆರೆ ದಾಟಿದರೆ ಪಶ್ಚಾತಾಪ ಪಡಬೇಕಾಗುತ್ತದೆ' ಎಂದು ಬರೆಯಲಾಗಿದೆ. ಅಂದ್ಹಾಗೆ, 'ಡ್ಯೂರೆಕ್ಸ್' ಕಾಂಡೋಮ್ ಕಂಪನಿಯೂ ಮಂಕಡೆಡ್ ಪ್ರಕರಣ ಬಳಸಿ ವಿಭಿನ್ನ ಜಾಹೀರಾತು ಸಿದ್ಧಪಡಿಸಿದೆ!