

ಬೆಂಗಳೂರು, ಮಾರ್ಚ್ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೊಚ್ಚಲ ಕಪ್ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಕಾದಾಡಲಿವೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಾರ್ಚ್ 23ರಂದು ರೋಚಕ ಹಣಾಹಣಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಂದರ್ಭದಲ್ಲಿ ಮೈಖೇಲ್ ಕನ್ನಡ ಆಯ್ಕೆಯ ಚೆನ್ನೈ ಸೂಪರ್ ಕಿಂಗ್ಸ್ ಆಡುವ ಹನ್ನೊಂದು ಆಟಗಾರರ ಸಂಭಾವ್ಯ ತಂಡವನ್ನು ಈಗಾಗಲೇ ಓದಿರುತ್ತೀರಿ. ಈಗ ಆರ್ ಸಿಬಿ ತಂಡದ ಸರದಿ.
ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಮೂರು ಬಾರಿ ಕಪ್ ಗೆದ್ದಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಮೆಂಟ್ ಪ್ರವೇಶಿಸುತ್ತಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪಹೊತ್ತು ಆಘಾತದಿಂದ ಹೊರ ಬಂದು ಕಳೆದ ವರ್ಷ ಕಪ್ ಗೆದ್ದ ಚೆನ್ನೈ ತಂಡ ಮೇಲ್ನೋಟಕ್ಕೆ ಆರ್ ಸಿಬಿಗಿಂತ ಬಲಿಷ್ಠವಾಗಿದೆ. ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದ್ದು, ಸ್ಥಿರ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ.
ಆರ್ ಸಿಬಿ ತಂಡದ ಆರಂಭಿಕ ಆಟಗಾರರು ಮತ್ತೊಮ್ಮೆ ಬದಲಾಗುವ ಸಾಧ್ಯತೆಯಿದೆ. ಇಂಗ್ಲೆಂಡಿನ ಆಲ್ ರೌಂಡರ್ ಮೋಯಿನ್ ಅಲಿ ಹಾಗೂ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಕಣಕ್ಕಿಳಿಯಬಹುದು.
ಸಂಭಾವ್ಯ ಆಡುವ ಹನ್ನೊಂದು ಮಂದಿ ಆಟಗಾರರು:
ಆರ್ ಸಿಬಿ: ಮೋಯಿನ್ ಅಲಿ, ಪಾರ್ಥೀವ್ ಪಟೇಲ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿ ವಿಲಿಯರ್ಸ್, ಶಿಮ್ರೋನ್ ಹೆಟ್ಮೆರ್, ಶಿವಂ ದುಬೇ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಉಮೇಶ್ ಯಾದವ್, ಟಿಮ್ ಸೌಥಿ, ಮೊಹಮ್ಮದ್ ಸಿರಾಜ್.