
ಕೋಲ್ಕತ್ತಾ, ಮಾರ್ಚ್ 17: ಸಂದೀಪ್ ವಾರಿಯರ್ ಮತ್ತು ಕೆಸಿ ಕಾರಿಯಪ್ಪ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಗಾಯಾಳಾಗಿರುವ ಆಟಗಾರರ ಬದಲಿಗೆ ಇಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಕೋಲ್ಕತ್ತಾ ಭಾನುವಾರ (ಮಾರ್ಚ್ 17) ಪ್ರಕಟಿಸಿದೆ.
27ರ ಹರೆಯದ ಕೇರಳದ ಆಟಗಾರ ವಾರಿಯರ್ ದೇಸಿ ತಂಡದಲ್ಲಿ ಆಡುತ್ತಿದ್ದರು. ಕಳೆದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಇನ್ನು ಕಾರಿಯಪ್ಪ ಅವರು ಕಳೆದ ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೆಕೆಆರ್ ಅನ್ನು ಪ್ರತಿನಿಧಿಸಿದ್ದರು.
ಒಟ್ಟು 40 ಟಿ20 ಪಂದ್ಯಗಳಲ್ಲಿ ಸಂದೀಪ್ 7.09 ಎಕಾನಮಿಯಲ್ಲಿ 41 ವಿಕೆಟ್ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕೇರಳ ಪ್ರತಿನಿಧಿಸಿದ್ದ ವಾರಿಯರ್, 6 ಪಂದ್ಯಗಳಲ್ಲಿ 5.81 ಎಕಾನಮಿಯಲ್ಲಿ 8 ವಿಕೆಟ್ ಮುರಿದಿದ್ದರು.
ಕಾರಿಯಪ್ಪ ಒಟ್ಟು 28 ಟಿ20 ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಉರುಳಿಸಿದ್ದಾರೆ. ಕೋಲ್ಕತ್ತಾ ತಂಡದಲ್ಲಿದ್ದ ಕಮಲೇಶ್ ನಗರ್ಕೋಟಿ ಮತ್ತು ಶಿವಂ ಮಾವಿ ಗಾಯದ ಕಾರಣ ತಂಡದಿಂದ ಹೊರ ಬಿದ್ದಿದ್ದರು. ಕಮಲೇಶ್, ಶಿವಂ ಇಬ್ಬರೂ ಬೆನ್ನು ನೋವಿಗೆ ತುತ್ತಾಗಿದ್ದರು. ಅಂತೂ ಮಾರ್ಚ್ 23ರಿಂದ ಆರಂಭವಾಗುವ ಐಪಿಎಲ್ನಲ್ಲಿ ಕೋಲ್ಕತ್ತಾ ತಂಡದಲ್ಲಿ ಹೊಸ ಆಟಗಾರರು ಮಿಂಚಲಿದ್ದಾರೆ.