
ಕೋಲ್ಕತಾ, ಮಾರ್ಚ್ 15: ಭಾರತದ ಪರ ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ್ದ ಬಲಗೈ ಯುವ ವೇಗದ ಬೌಲರ್ ಕಮಲೇಶ್ ನಾಗರ್ ಕೋಟಿ ಅವರ ಐಪಿಎಲ್ ಕನಸು ಭಗ್ನಗೊಂಡಿದೆ.
ಐಪಿಎಲ್ 12ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಲು ಸಜ್ಜಾಗುತ್ತಿದ್ದ ಕಮಲೇಶ್ ಅವರು ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿಯಬೇಕಿದೆ ಎಂದು ಕೋಚ್ ಸೈಮನ್ ಕಟಿಚ್ ಹೇಳಿದ್ದಾರೆ.
ಪಾದದ ಗಾಯದಿಂದಾಗಿ ಹಲವು ತಿಂಗಳುಗಳಿಂದ ಬಳಲುತ್ತಿರುವ ಕಮಲೇಶ್ ಇನ್ನು ಗುಣಮುಖರಾಗಿಲ್ಲ. ಕಮಲೇಶ್ ಬದಲಿಗೆ ಕೇರಳದ 27 ವರ್ಷದ ವೇಗಿ ಸಂದೀಪ್ ವಾರಿಯರ್ ಅವರನ್ನು ಬದಲಿ ಆಟಗಾರನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರಿಸಿದೆ.

ಐಪಿಎಲ್ ಹರಾಜಿನಲ್ಲಿ ಸಂದೀಪ್ ರನ್ನು ಯಾರೂ ಖರೀದಿಸಿರಲಿಲ್ಲ. ಕಳೆದ ರಣಜಿ ಸೀಸನ್ ನಲ್ಲಿ 10 ಪಂದ್ಯಗಳಿಂದ ಸಂದೀಪ್ 44 ವಿಕೆಟ್ ಹಾಗೂ ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ 6 ಪಂದ್ಯಗಳಿಂದ 8 ವಿಕೆಟ್ ಗಳಿಸಿ ಗಮನ ಸೆಳೆದಿದ್ದಾರೆ.
ಐಪಿಎಲ್ ಹರಾಜಿನಲ್ಲಿ 3.2 ಕೋಟಿ ರು ನೀಡಿ ಕಮಲೇಶ್ ರನ್ನು ಕೆಕೆಆರ್ ತಂಡ ಖರೀದಿಸಿತ್ತು. 150 ಕಿ.ಮೀ ವೇಗದಲ್ಲಿ ಚೆಂಡು ಎಸೆಯುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದ ಕಮಲೇಶ್ ಅವರಿಗೆ ಭಾರಿ ನಿರಾಶೆಯಾಗಿದೆ
ಆಲ್ ರೌಂಡರ್ ಶಿವಂ ಮಾವಿ ಕೂಡ ಗಾಯಾಳುವಾಗಿದ್ದು, ಕೆಕೆಆರ್ ತಂಡದಿಂದ ಹೊರಗುಳಿಯಬೇಕಾಗಿದೆ. ಈ ಹಿಂದಿನ ಸೀಸನ್ ನಲ್ಲಿ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣ ಅವರು ಬದಲಿ ಆಟಗಾರನಾಗಿ ಕೆಕೆಆರ್ ಸೇರಿ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದರು.
ಕೆಕೆಆರ್ ಐಪಿಎಲ್ 2019 ತಂಡ : ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಆಂಡ್ರೆ ರಸೆಲ್, ಸುನಿಲ್ ನರೇನ್,ಶುಭಂ ಗಿಲ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ, ನಿತೀಶ್ ರಾಣಾ, ರಿಂಕು ಸಿಂಗ್, ಕಾರ್ಲೊಸ್ ಬ್ರಥ್ ವೈಟ್, ಲಾಕಿ ಫರ್ಗುಸನ್, ಅಂರಿಚ್ ನೊರ್ಜೆ, ನಿಖಿಲ್ ನಾಯ್ಕ್, ಹ್ಯಾರಿ ಗರ್ನಿ, ಪೃಥ್ವಿರಾಜ್, ಜೋ ಡೆನ್ಲಿ, ಶ್ರೀಕಾಂತ್ ಮುಂಡೆ.