ವಿಶ್ವಕಪ್ ಬಳಿಕ ಯೋಜನೆ
ಮೇ 30ರಂದು ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಮುಗಿದ ಬಳಿಕ ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿ ಕುರಿತಾಗಿ ಎಂ.ಎಸ್ ಧೋನಿ ಜೊತೆಗೆ ಚರ್ಚಿಸಲಿದ್ದೇವೆ ಎಂದು ನ್ಯೂಜಿಲೆಂಡ್ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಇದೇ ವೇಳೆ ಉಳಿದ ತಂಡಗಳಂತೆ ನಮ್ಮ ತಂಡ ಕೂಡ ಹೊಸ ಪ್ರತಿಭೆಗಳನ್ನು ಗುರುತಿಸಿದ್ದು, ಹೊಸದಾಗಿ ತಂಡ ರಚಿಸುವ ಕುರಿತಾಗಿ ಆಲೋಚಿಸುತ್ತಿದ್ದೇವೆ ಎಂದಿದ್ದಾರೆ.
"ಐಪಿಎಲ್ನ ಉಳಿದ ತಂಡಗಳು ಈಗಾಗಲೇ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಹೊಸದಾಗಿ ತಂಡ ರಚಿಸುವ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕಾಗಿದೆ. ಇದೀಗ ಧೋನಿ ವಿಶ್ವಕಪ್ಗೆ ಪ್ರಯಾಣ ಬೆಳೆಸಲಿದ್ದಾರೆ. ಯುವ ಪ್ರತಿಭೆಗಳನ್ನು ಆಯ್ಕೆ ಮಾಡಲು ಎಂಎಸ್ ಇರಲೇಬೇಕು,'' ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಬ್ಯಾಟ್ಸ್ಮನ್ಗಳ ಪ್ರದರ್ಶನ ನಿರಾಸೆ ತಂದಿದೆ
ಟೂರ್ನಿಯುದ್ದಕ್ಕೂ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದು, ಬ್ಯಾಟ್ಸ್ಮನ್ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ ಎಂದು ಫ್ಲೆಮಿಂಗ್ ಅಭಿಪ್ರಾಯ ಪಟ್ಟಿದ್ದಾರೆ. "ಈ ವರ್ಷ ಚೆನ್ನೈನ ಪಿಚ್ ಅತ್ಯಂತ ಕಠಿಣವಾಗಿತ್ತು. ಪಿಚ್ ಬಗ್ಗೆ ಅರಿಯುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಇಲ್ಲಿ ಆಡುವುದು ಕಠಿಣವಾಗಿತ್ತು. ಇದೇ ಪಿಚ್ನಲ್ಲಿ ಅಭ್ಯಾಸ ನಡೆಸಿದ್ದರೂ ಕೂಡ ಇಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಆಟವಾಡಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಸರಾಸರಿ ರನ್ ಗಮನಿಸಿದರೆ ಮತ್ತಷ್ಟು ಉತ್ತಮ ಪ್ರದರ್ಶ ತರಬಹುದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಬಾರಿಯ ಐಪಿಎಲ್ನಲ್ಲಿ ಬ್ಯಾಟಿಂಗ್ ನಮ್ಮ ದೌರ್ಬಲ್ಯವಾಗಿತ್ತು,'' ಎಂದು ಫ್ಲೆಮಿಂಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ವ್ಯಾಟ್ಸ್ನ್ ಬಗ್ಗೆ ಮೆಚ್ಚುಗೆ
ಫೈನಲ್ ಪಂದ್ಯದಲ್ಲಿ ಸಿಎಸ್ಕೆ ತಂಡದ ಬ್ಯಾಟಿಂಗ್ ವಿಭಾಗದ ಶ್ರಮ ಸಾಧಾರಣವಾಗಿತ್ತು ಎಂದಿರುವ ಫ್ಲೆಮಿಂಗ್, ಅಂತ್ಯದ ವರೆಗೂ ಹೋರಾಟ ಕಾಯ್ದುಕೊಂಡ ಶೇನ್ ವ್ಯಾಟ್ಸನ್ ಅವರ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪಂದ್ಯದಲ್ಲಿ 150 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡದ ಪರ ವ್ಯಾಟ್ಸನ್ 59 ಎಸೆತಗಳಲ್ಲಿ 80 ರನ್ಗಳನ್ನು ಸಿಡಿಸಿ ಇನ್ನೇನು ತಂಡವನ್ನು ಗುರಿ ಮುಟ್ಟಿಸುವ ಹೊಸ್ತಿಲಲ್ಲಿ ರನ್ ಔಟಾದರು. "ಫೈನಲ್ನಲ್ಲಿ ಕೊನೆಯ ಎಸೆತದ ವರೆಗೂ ಪಂದ್ಯ ಸಾಗಿತ್ತು. ಟೂರ್ನಿಯುದ್ದಕ್ಕೂ ನಮ್ಮ ಬ್ಯಾಟಿಂಗ್ ವಿಭಾಗ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ, ಹೋರಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ವ್ಯಾಟ್ಸನ್ ಕೂಡ ಕೊನೆಯ ವರೆಗೂ ಹೋರಾಟ ನಡೆಸಿದರು,'' ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಧೋನಿ ರನ್ಔಟ್ ನಿರ್ಣಾಯಕ
ಫೈನಲ್ ಪಂದ್ಯದ ದಿಕ್ಕು ಬದಲಾಗಿದ್ದು ಎಂ.ಎಸ್ ಧೋನಿ ರನ್ಔಟ್ ಆದಾಗ. ಇಶಾನ್ ಕಿಶನ್ ಅವರ ಡೈರೆಕ್ಟ್ ಹಿಟ್ಗೆ ಎಂಎಸ್ಡಿ ರನ್ಔಟ್ ಆದರು ಇದು ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಟ್ಟಿತು. "ಪಂದ್ಯದ ದಿಕ್ಕು ಬದಲಾದ ಕ್ಷಣವದು. ಅಂಪೈರ್ ಕೂಡ ಈ ನಿರ್ಧಾರ ನೀಡಲು ಸಾಕಷ್ಟು ಸಮಯ ತೆಗೆದುಕೊಂಡರು. ಎಂ.ಎಸ್ ಔಟಾದರೆ ಅದು ದೊಡ್ಡ ಸಂಗತಿ. ಬ್ಯಾಟಿಂಗ್ನಲ್ಲಿ ಈ ವರ್ಷ ಅವರು ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದರು. ಅದರಲ್ಲೂ ಇನಿಂಗ್ಸ್ ಅಂತ್ಯದಲ್ಲಿ ಅವರು ಶಾಂತ ರೀತಿಯಲ್ಲಿ ಒತ್ತಡವನ್ನು ನಿಭಾಯಿಸುತ್ತಾರೆ. ಉಳಿದ ಆಟಗಾರರಲ್ಲಿ ಈ ಕಲೆ ಇಲ್ಲ. ಅವರ ನಿರ್ಗಮನದಿಂದ ನಮ್ಮ ತಂಡದ ಮೇಲೆ ಒತ್ತಡ ಹೆಚ್ಚಾಗಿ, ಎದುರಾಳಿ ತಂಡದ ಆತ್ಮವಿಶ್ವಾಸ ದ್ವಿಗುಣವಾಯಿತು,'' ಎಂದು ಫ್ಲೆಮಿಂಗ್ ಸೋಲಿಗೆ ಪ್ರಮುಖ ಕಾರಣವನ್ನು ವಿವರಿಸಿದ್ದಾರೆ.


Click it and Unblock the Notifications












