IPL 2020: ಕಿಂಗ್ಸ್ ಇಲೆವೆನ್ ವಿರುದ್ಧ ಆರ್ಸಿಬಿ ಸೋಲಿಗೆ 5 ಕಾರಣಗಳು

ಮೊದಲ ಪಂದ್ಯವನ್ನು 'ದೇವರಿಗೆ ಅರ್ಪಿಸುವ' ಸಂಪ್ರದಾಯ ಮುರಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಎರಡನೆಯ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಾಣುವ ಮೂಲಕ ಸಂಪ್ರದಾಯ ಮುರಿದಿದ್ದಕ್ಕೆ ಪ್ರಾಯಶ್ಚಿತದಂತೆ 'ದೇವರಿಗೆ ಅರ್ಪಣೆ' ಮಾಡಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಆರ್ಸಿಬಿ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅದೇ ರಾಗ ಅದೇ ಹಾಡು ಎಂಬಂತೆ ತನ್ನ ಹಿಂದಿನ ಆವೃತ್ತಿಗಳಲ್ಲಿ ನೀಡಿದಂತೆಯೇ ಕೆಟ್ಟ ಪ್ರದರ್ಶನ ಕೊಟ್ಟು ಅಭಿಮಾನಿಗಳಲ್ಲಿ ನಿರಾಶೆ ಉಂಟುಮಾಡಿದೆ. ಮೊದಲ ಪಂದ್ಯ ಗೆದ್ದಾಗ ಕಪ್ ಗೆದ್ದಂತೆಯೇ ಸಂಭ್ರಮಿಸಿದ ಅಭಿಮಾನಿಗಳು, ಈ ಸಲವೂ ಕಪ್ ಮರೀಚಿಕೆಯಾಗಿ ಉಳಿಯಲಿದೆ ಎಂಬ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗುರುವಾರದ ಪಂದ್ಯದಲ್ಲಿ ಆರ್ಸಿಬಿ ಪ್ರದರ್ಶನ ಕಂಡಾಗ ಯಾವ ವಿಭಾಗದಲ್ಲಿ ಸುಧಾರಣೆಯಾಗಬೇಕು ಎಂದು ವಿಶ್ಲೇಷಿಸುವುದಕ್ಕಿಂತ ಯಾವ ವಿಭಾಗದಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನುವುದನ್ನು ಗುರುತಿಸುವುದೇ ಸುಲಭ ಎನಿಸುತ್ತದೆ. ಏಕೆಂದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಗಳಲ್ಲಿ ಆರ್ಸಿಬಿ ತೀರಾ ಕಳಪೆ ಪ್ರದರ್ಶನ ತೋರಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಹೀನಾಯ ಸೋಲಿಗೆ ಐದು ಪ್ರಮುಖ ಕಾರಣಗಳು ಇಲ್ಲಿವೆ.

ಬೌಲಿಂಗ್ ಆಯ್ಕೆಯ ತೀರ್ಮಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಕ್ತಿ ಎಂದರೆ ಬ್ಯಾಟಿಂಗ್. ಯುಜುವೇಂದ್ರ ಚಾಹಲ್ ಹೊರತುಪಡಿಸಿ ತಂಡದಲ್ಲಿ ನಂಬಿಕಸ್ತ ಬೌಲರ್ ಬೇರೆ ಇಲ್ಲ. ವೇಗಿ ಡೇಲ್ ಸ್ಟೇಯ್ನ್ ಕೂಡ ತಮ್ಮ ಮೊನಚು ಕಳೆದುಕೊಂಡಿದ್ದಾರೆ. ಹೀಗಿರುವಾಗ ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೆ ದೊಡ್ಡ ಮೊತ್ತ ಪೇರಿಸಿ ಎದುರಾಳಿ ಮೇಲೆ ಒತ್ತಡ ಹೇರುವ ಅವಕಾಶವಿತ್ತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಇಲ್ಲಿ ಚೇಸಿಂಗ್ ಕಷ್ಟ ಎನ್ನುವುದಕ್ಕೆ ಇದುವರೆಗೆ ನಡೆದ ಪಂದ್ಯಗಳೇ ಸಾಕ್ಷಿಯಾಗಿವೆ.

ದುರ್ಬಲ ಬೌಲಿಂಗ್ ಪಡೆ
ಐಪಿಎಲ್ನಲ್ಲಿ ಆರ್ಸಿಬಿ ಬೌಲಿಂಗ್ ಪಡೆ ಬಹಳ ಹಿಂದಿನಿಂದಲೂ ಕಾಗದದ ಮೇಲಿನ ಹುಲಿ. ಇಲ್ಲಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯವುಳ್ಳ ಏಕೈಕ ಬೌಲರ್ ಎಂದರೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮಾತ್ರ. ಕಳೆದ ಪಂದ್ಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಉಮೇಶ್ ಯಾದವ್, ಈ ಬಾರಿಯೂ ಎದುರಾಳಿಗಳಿಗೆ ರನ್ ನೀಡುವಲ್ಲಿ ಉದಾರತೆ ಪ್ರದರ್ಶಿಸಿದ್ದರು. ಉಮೇಶ್ ಯಾದವ್ ಕಳೆದ ಆವೃತ್ತಿಗಳಲ್ಲಿ ಕೂಡ ಕಳಪೆ ಬೌಲಿಂಗ್ ಪ್ರದರ್ಶಿಸಿದ್ದರೂ ಕೊಹ್ಲಿಗೆ ಅವರ ಮೇಲಿನ ನಂಬಿಕೆ ಕಡಿಮೆಯಾದಂತಿಲ್ಲ. ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರಾದ ಉಮೇಶ್ ಯಾದವ್ ಒಂದು ಓವರ್ ಬಾಕಿ ಉಳಿದಿದ್ದರೂ ಮೊದಲ ಎರಡು ಓವರ್ಗಳಲ್ಲಿ ಎರಡು ವಿಕೆಟ್ ಕಿತ್ತ ಶಿವಮ್ ದುಬೆ ಅವರಿಗೆ ಕೊನೆಯ ಓವರ್ ನೀಡುವ ಸ್ಥಿತಿ ಬಂದಿತ್ತು. ಈ ಪಂದ್ಯದಲ್ಲಿ ಡೇಲ್ ಸ್ಟೇನ್ ಕೂಡ ಮಂಕಾದರು.
ಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿ

ಕಳಪೆ ಫೀಲ್ಡಿಂಗ್
ಆರ್ಸಿಬಿ ಕ್ಷೇತ್ರ ರಕ್ಷಣೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಂಡಿಲ್ಲ. ಎಬಿ ಡಿವಿಲಿಯರ್ಸ್ ಬಿಟ್ಟು ಯಾವ ಆಟಗಾರರೂ ಫೀಲ್ಡ್ನಲ್ಲಿ ಚುರುಕಾಗಿರುವುದು ಕಾಣಿಸುತ್ತಿಲ್ಲ. ಅತ್ಯುತ್ತಮ ಫೀಲ್ಡರ್ ಎನಿಸಿರುವ ನಾಯಕ ಕೊಹ್ಲಿ ಸ್ವತಃ ಎರಡು ಸುಲಭದ ಕ್ಯಾಚ್ಗಳನ್ನು ಚೆಲ್ಲಿ ನಗೆಪಾಟಲಿಗೀಡಾದರು. ಈ ಎರಡು ಕ್ಯಾಚ್ಗಳು ಎಷ್ಟು ದುಬಾರಿಯಾದವು ಎಂದರೆ ಕೆಎಲ್ ರಾಹುಲ್ಗೆ 38 ರನ್ ಹೆಚ್ಚುವರಿಯಾಗಿ ಗಳಿಸಲು ಸಾಧ್ಯವಾಯಿತು. ಬೌಂಡರಿ ಲೈನ್ನಲ್ಲಿ ಕೂಡ ಹೆಚ್ಚುವರಿ ರನ್ಗಳನ್ನು ಸೋರಿಕೆ ಮಾಡಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದಕ್ಕೆ ತದ್ವಿರುದ್ಧ ಪ್ರದರ್ಶನ ನೀಡಿತು.

ಪೆವಿಲಿಯನ್ ಪೆರೇಡ್
ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಿದ್ದ ಆರ್ಸಿಬಿಗೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್, ಬಿಬಿಎಲ್ನಲ್ಲಿ ಖ್ಯಾತಿ ಪಡೆದಿದ್ದ ಜೋಷ್ ಫಿಲಿಪ್ ಹಾಗೆಯೇ ನಾಯಕ ಕೊಹ್ಲಿ ಕೂಡ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಹಾದಿ ಹಿಡಿದರು. ಎರಡು ವಿಕೆಟ್ ಕಳೆದುಕೊಂಡಿದ್ದಾಗ ಕೊಹ್ಲಿ ಕೊಂಚ ಸಹನೆಯ ಆಟವಾಡಿದ್ದರೆ ಆರಂಭಿಕ ಕುಸಿತದಿಂದ ತಂಡವನ್ನು ಮೇಲೆತ್ತಬಹುದಾಗಿತ್ತು. ಟಿ20 ಪರಿಣತರಾದ ಆರೋನ್ ಫಿಂಚ್ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಒತ್ತಡ ಹೆಚ್ಚಾಗಿತ್ತು. ಪವರ್ ಪ್ಲೇ ಬ್ಯಾಟಿಂಗ್ ಆರ್ಸಿಬಿಗೆ ನಿರ್ಣಾಯಕವಾಗಿತ್ತು. ಆದರೆ ಆಗಲೇ ತಂಡ ಮಾನಸಿಕವಾಗಿ ಸೋಲು ಕಂಡಿತ್ತು.
ಐಪಿಎಲ್: ಆರ್ಸಿಬಿ ಬೆನ್ನು ಹತ್ತಿದೆ ಅತಿ ಹೆಚ್ಚು ''ಕ್ಯಾಚ್ ಡ್ರಾಪ್'' ದಾಖಲೆ

ಪಂಜಾಬ್ ಪ್ರಾಬಲ್ಯ
ನಾಯಕ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರವಾಲ್ ಪಂಜಾಬ್ ತಂಡಕ್ಕೆ ಅತ್ಯುತ್ತಮ ಬುನಾದಿ ಹಾಕಿದ್ದರು. ನಡುವೆ ಸತತ ಎರಡು ವಿಕೆಟ್ ಪತನಗೊಂಡರೂ ರಾಹುಲ್ ಒತ್ತಡಕ್ಕೆ ಒಳಗಾಗದೆ ತಮ್ಮ ನೈಜ ಆಟವನ್ನು ಮುಂದುವರಿಸಿದ್ದರು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ತಂಡಕ್ಕೆ ಕ್ರಿಸ್ ಮಾರಿಸ್ ಅವರಂತಹ ಅಲ್ರೌಂಡರ್ ಅಗತ್ಯವಿತ್ತು. ಉತ್ತಮ ಆಟಗಾರರಿದ್ದರೂ ಕೊಹ್ಲಿ ಅವರ ತಂಡದ ಆಯ್ಕೆ ಸೂಕ್ತವಾಗಿರಲಿಲ್ಲ. ಜತೆಗೆ ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಮಾಡಿದ ರೀತಿ ಸಮರ್ಪಕವಾಗಿರಲಿಲ್ಲ. ಆರ್ಸಿಬಿಯ ವೈಫಲ್ಯಗಳನ್ನು ಪಂಜಾಬ್ ತಂಡ ಸಮಪರ್ಕವಾಗಿ ಉಪಯೋಗಿಸಿಕೊಂಡು ಸವಾರಿ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications