
ಇಬ್ಬರು ಆಟಗಾರರು ಸಿಬ್ಬಂದಿಗಳು ಸೇರಿದಂತೆ ಚೆನ್ನೈ ತಂಡದ 13 ಮಂದಿ ಕೊರೊನಾ ವೈರಸ್ಗೆ ತುತ್ತಾಗಿದ್ದರು. ಆದರೆ ಸೋಮವಾರ ನಡೆದ ಕೋವಿಡ್-19 ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೊನಾ ಮುಕ್ತರಾಗಿರುವುದು ತಿಳಿದು ಬಂದಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಬಳಗ ನಿಟ್ಟುಸಿರುವ ಬಿಡುವಂತಾಗಿದೆ.
ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದರೂ ಸದ್ಯಕ್ಕೆ ಆಟಗಾರರು ಅಭ್ಯಾಸಕ್ಕೆ ಇಳಿಯುವಂತಿಲ್ಲ. ಯಾಕೆಂದರೆ ಅಭ್ಯಾಸಕ್ಕೆ ಇಳಿಯುವ ಮುನ್ನ ಇನ್ನೊಂದು ಸುತ್ತಿನ ಕೊರೊನಾ ಪರೀಕ್ಷೆಗೆ ಆಟಗಾರರು ಹಾಗೂ ಸಿಬ್ಬಂದಿಗಳು ಒಳಗಾಗಬೇಕಿದ್ದು ಅದರಲ್ಲೂ ನೆಗೆಟಿವ್ ವರದಿ ಖಾತ್ರಿಪಡಿಸಿಕೊಳ್ಳಬೇಕಿದೆ. ಆ ಬಳಿಕವೇ ಬಯೋ ಸೆಕ್ಯೂರ್ ಬಬಲ್ ಸೇರಿಕೊಳ್ಳಲಿದ್ದಾರೆ.
ಚೆನ್ನೈ ತಂಡದ ಎಲ್ಲಾ ಆಟಗಾರರ ಹಗೂ ಸಿಬ್ಬಂದಿಗಳ ಮುಂದಿನ ಕೊರೊನಾ ಪರೀಕ್ಷೆ ಸೆಪ್ಟೆಂಬರ್ 3ನೇ ತಾರೀಕಿಗೆ ನಡೆಯಲಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದ ಬಳಿಕ 5ನೇ ತಾರೀಕಿನಿಂದ ಚೆನ್ನೈ ತಂಡ ಅಭ್ಯಾಸಕ್ಕಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಹಾಗಿದ್ದರೂ ಈಗಾಗಲೇ ಒಮ್ಮೆ ಕೊರೊನಾ ವೈರಸ್ಗೆ ತುತ್ತಾಗಿರುವ ಇಬ್ಬರು ಆಟಗಾರರಾದ ದೀಪಕ್ ಚಾಹರ್ ಹಾಗೂ ಋತುರಾಜ್ ಗಾಯಕ್ವಾಡ್ ನಿರ್ಬಂಧ ಮುಂದುವರಿಯಲಿದೆ. ಈ ಆಟಗಾರರು ಸೆಪ್ಟೆಂಬರ್ 12ರ ನಂತರವೇ ಅಭ್ಯಾಸಕ್ಕೆ ಲಭ್ಯರಾಗಲಿದ್ದಾರೆ. ಅಲ್ಲಿಯ ವರೆಗೂ ಈ ಇಬ್ಬರು ಆಟಗಾರರು ಹಾಗೂ ಉಳಿದ ಪಾಸಿಟಿವ್ ವರದಿ ಕಂಡುಬಂದ ಸಿಬ್ಬಂದಿಗಳು ಐಸೋಲೇಷನ್ನಲ್ಲೇ ಮುಂದುವರಿಯಲಿದ್ದಾರೆ.
ಎಲ್ಲವೂ ಸರಾಗವಾಗಿಯೇ ನಡೆಯುತ್ತಾ ಕ್ವಾರಂಟೈನ್ ಮುಗಿಸಿ ಅಭ್ಯಾಸ ಶಿಬಿರಕ್ಕೆ ಸಿಎಸ್ಕೆ ಸಿದ್ದವಾಗುತ್ತಿದ್ದಂತೆಯೇ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೊನಾ ವೈರಸ್ಗೆ ತುತ್ತಾಗಿರುವುದು ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಅದಾದ ಬೆನ್ನಿಗೇ ಸುರೇಶ್ ರೈನಾ ಹಠಾತ್ ಆಗಿ ಕೌಟಿಂಬಿಕ ಕಾರಣಗಳಿಂದ ಈ ಬಾರಿಯ ಐಪಿಎಲ್ ತೊರೆಯುವ ನಿರ್ಧಾರ ಮಾಡಿ ಭಾರತಕ್ಕೆ ವಾಪಾಸ್ಸಾಗಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಕಳೆದ 2-3 ದಿನಗಳಿಂದ ಸಿಎಸ್ಕೆ ಸಾಕಷ್ಟು ಸುದ್ದಿಯಾಗಿದೆ.