
ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಕ್ರಿಸ್ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹೊಸ ಶಕ್ತಿಯನ್ನು ತುಂಬುವಲ್ಲಿ ಯಶಸ್ವಿಯಾದರು ಎಂದು ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಸುತ್ತಿನ ಪಂದ್ಯಗಳಲ್ಲಿ ಕೆಲ ಅದ್ಭುತ ಪ್ರದರ್ಶನಗಳ ಹೊರತಾಗಿಯೂ ಗೆಲುವು ಕಾಣಲು ವಿಫಲವಾಗಿತ್ತು. ಕೆಲ ಗೆಲ್ಲಬಲ್ಲ ಪಂದ್ಯಗಳನ್ನು ಪಂಜಾಬ್ ಅಂತಿಮ ಹಂತದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಸೋಲು ಕಾಣುವಂತಾಗಿತ್ತು. ಆದರೆ ಕ್ರಿಸ್ ಗೇಲ್ ಆಡುವ ಬಳಗಕ್ಕೆ ಸೇರ್ಪಡೆಗೊಂಡ ಬಳಿಕ ಕಾಕತಾಳೀಯ ಎಂಬಂತೆ ಎಲ್ಲ ಪಂದ್ಯಗಳಲ್ಲಿ ಗೆಲುವು ಕಾಣುತ್ತಾ ಸಾಗಿದೆ.
ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ "ಕ್ರಿಸ್ ಗೇಲ್ ವಿಚಾರದಲ್ಲಿ ಜನರು ಗೇಕ್ ಅವರ ಬಿಗ್ ಹಿಟ್ಟಿಂಗ್ ಬಗ್ಗೆಯೇ ಮಾತನಾಡುತ್ತಾರೆ. ಅದು ಎಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನವರು ಒಂದು ವಿಚಾರವನ್ನು ತಿಳಿದುಕೊಂಡಿಲ್ಲ. ಗೇಲ್ ಓರ್ವ ಬುದ್ದಿವಂತ ಆಟಗಾರ ಎಂಬುದನ್ನು. ಗೇಲ್ ಬಿಗ್ ಹಿಟ್ಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಆತ ಅಷ್ಟೇ ಚಾಣಾಕ್ಷ ಕೂಡ ಹೌದು" ಎಂದಿದ್ದಾರೆ ತೆಂಡೂಲ್ಕರ್.
"ಕ್ರಿಸ್ ಗೇಲ್ ಯಾವುದೇ ಬೌಲರ್ ತನ್ನನ್ನು ಔಟ್ ಮಾಡಬಲ್ಲ ಎಂದು ಅನಿಸಿದರೆ ಆತನ ಓವರ್ನಲ್ಲಿ ಎಚ್ಚರಿಕೆಯ ಆಟವನ್ನಾಡುತ್ತಾರೆ. ಬಳಿಕ ಆತ ಓರ್ವ ಅಥವಾ ಇಬ್ಬರು ಬೌಲರ್ಗಳನ್ನು ಡೆಲ್ಲಿ ವಿರುದ್ದದ ಪಂದ್ಯದಲ್ಲಿ ತುಶಾರ್ ದೇಶ್ಪಾಂಡೆಯನ್ನು ಗುರಿಯಾಗಿಸಿದ ರೀತಿಯಲ್ಲಿ ಬೆಂಡೆತ್ತುತ್ತಾರೆ. ಅಮದು ಒಂದು ಓವರ್ನಲ್ಲಿ ಗೇಲ್ 26 ರನ್ಗಳನ್ನು ಗಳಿಸಿದ್ದರು" ಎಂದು ಸಚಿನ್ ತೆಂಡೂಲ್ಕರ್ ವಿವರಿಸಿದ್ದಾರೆ.
"ಕ್ರಿಸ್ ಗೇಲ್ ಚಾಣಾಕ್ಷ ಆಟಗಾರ. ಆತ ಪ್ರತಿ ಎಸೆತಕ್ಕೂ ಮುನ್ನುಗ್ಗಿ ಬಾರಿಸಲು ಪ್ರಯತ್ನಿಸುವುದಿಲ್ಲ. ಆತ ಪಿಚ್ನ ಮೇಲ್ಮೈಯನ್ನು ಅರ್ತ ಮಾಡಿಕೊಳ್ಳುತ್ತಾರೆ. ಯಾವ ಬೌಲರ್ ಇಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾರನ್ನು ಗುರಿಯಾಗಿಸಬಹುದು ಎಂದು ಅರ್ಥ ಮಾಡಿಕೊಂಡು ಬಳಿಕ ಮುನ್ನುಗ್ಗಿ ಬಾರಿಸಲು ಆರಂಭಿಸುತ್ತಾರೆ" ಎಂದು ಸಚಿನ್ ತೆಂಡೂಲ್ಕರ್ ಕ್ರಿಸ್ ಗೇಲ್ ಬಗ್ಗೆ ವಿವರಿಸಿದ್ದಾರೆ.