
ಅಬುಧಾಬಿ: ಶನಿವಾರ (ಅಕ್ಟೋಬರ್ 10) ನಡೆದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 2 ವಿಕೆಟ್ ರೋಚಕ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಕೆಕೆಆರ್ ಪ್ರಮುಖ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಕಾಲಿಗೆ ಗಾಯ ಮಾಡಿಕೊಂಡಿದ್ದರು.
ಬೌಂಡರಿಯನ್ನು ತಪ್ಪಿಸುವ ಯತ್ನದ ವೇಳೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಗಿರುವ ಆ್ಯಂಡ್ರೆ ರಸೆಲ್ ಮೊಣಕಾಲಿಗೆ ಗಾಯವಾಗಿತ್ತು. ಪಂದ್ಯದಲ್ಲಿ ರಸೆಲ್ ಬದಲಿಗೆ ಕ್ರಿಸ್ ಗ್ರೀನ್ ಅವರನ್ನು ಮೈದಾನಕ್ಕಿಳಿಸಲಾಯ್ತು. ರಸೆಲ್ ಗಾಯದ ಸ್ಥಿತಿಯ ಬಗ್ಗೆ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಮಾಹಿತಿ ನೀಡಿದ್ದಾರೆ.
ರಸೆಲ್ ಬಗ್ಗೆ ಮಾತನಾಡಿದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಗಾಯ ಸ್ವಲ್ಪ ಗಂಭೀರ ಗಾಯವಾಗಿತ್ತು ಅನ್ನೋ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ರಸೆಲ್ ಅವರನ್ನು ಕಾರ್ತಿಕ್ ತುಂಬಾ ತುಂಬಾ ವಿಶೇಷ ಆಟಗಾರ ಎಂಬಂತೆ ಕರೆದಿದ್ದಾರೆ.
'ಯಾವಾಗ ರಸೆಲ್ ಗಾಯಕ್ಕೀಡಾದರೂ ಅದರಿಂದ ತುಂಬಾ ಬೇಸರವಾಗುತ್ತದೆ ಅನ್ನೋದು ನಿಮಗೆ ಗೊತ್ತಾಗಬಹುದು. ಯಾಕೆಂದರೆ ಅವರು ತುಂಬಾ ವಿಶೇಷ ಆಟಗಾರ, ತುಂಬಾ ವಿಶೇಷ ವ್ಯಕ್ತಿ. ಆದರೆ ಅವರ ಸ್ಥಿತಿ ನಾವು ಹೋಗಿ ಇನ್ನಷ್ಟೇ ನೋಡಬೇಕಾಗಿದೆ,' ಎಂದು ಕಾರ್ತಿಕ್ ಹೇಳಿದ್ದಾರೆ.