
ಅಬುಧಾಬಿಯಲ್ಲಿ ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಅತ್ಯಂತ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೆಂದು ಅಭಿಮಾನಿಗಳು ರುದ್ರಾಭಿಷೇಕ ಮಾಡಿಸಿರುವ ಘಟನೆಗೆ ರಾಯಚೂರು ಸಾಕ್ಷಿಯಾಗಿದೆ.
ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಹ್ಲಿ ನೇತೃತ್ವದ ಆರ್ಸಿಬಿ ಪ್ಲೇ ಆಫ್ ಹಂತಕ್ಕೇಲೆಂದು ಈಗಾಗಲೇ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿದ ಆಭಿಮಾನಿಗಳು, ತಮ್ಮ ನೆಚ್ಚಿನ ತಂಡವನ್ನ ಗೆಲ್ಲಿಸು ಎಂದು ಅಮರೇಶ್ವರ ದೇವರಲ್ಲಿ ಮೊರೆಯಿಟ್ಟಿದ್ದಾರೆ.
ಸಧ್ಯ ಆರ್ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿರುವ ರುದ್ರಾಭಿಷೇಕದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಡಿರುವ 13 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಆರು ಸೋಲುಗಳನ್ನ ಕಂಡಿರುವ ಆರ್ಸಿಬಿ 14 ಅಂಕಗಳೊಂದಿಗೆ, ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.