
ಅರಬ್ ನಾಡಿನಲ್ಲಿ ಶನಿವಾರ (ಅ 3) ನಡೆದ ಮತ್ತೊಂದು ರನ್ನಿನ ಪ್ರವಾಹವೇ ಹರಿದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮಂಡಿಯೂರಿದೆ.
ಆ ಮೂಲಕ, ಆಡಿದ ನಾಲ್ಕು ಪಂದ್ಯದಲ್ಲಿ ಎರಡರಲ್ಲಿ ಸೋತು, ಕೆಕೆಆರ್ ತಂಡ, ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನು, ಮೂರು ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದೆ.
ಕೆಕೆಆರ್ ಪಂದ್ಯ ಸೋತ ಬಗ್ಗೆ ಮಾಜಿ ವೇಗಿ ಶ್ರೀಶಾಂತ್ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದು, "ದಿನೇಶ್ ಕಾರ್ತಿಕ್ ನಾಯಕತ್ವದಿಂದ ಕೆಳಗಿಳಿಯಲು ಇದು ಸೂಕ್ತ ಸಮಯ. ತಂಡದಲ್ಲಿ ಅನುಭವಿ ಆಟಗಾರನಿರುವಾಗ ಕಾರ್ತಿಕ್, ಕ್ಯಾಪ್ಟನ್ಸಿ ತೊರೆಯುವುದು ಒಳ್ಳೆಯದು"ಎಂದಿದ್ದಾರೆ.
"ಇಯಾನ್ ಮಾರ್ಗನ್ ಅವರನ್ನು ಕೆಕೆಆರ್ ತಂಡದ ನಾಯಕನನ್ನಾಗಿ ಮಾಡಬೇಕು. ಅವರಿಗೆ ಸೂಕ್ತ ಅನುಭವವಿದೆ. ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಮೊರ್ಗನ್, ತಂಡಕ್ಕೆ ಆಸರೆಯಾಗಬಲ್ಲರು"ಎಂದು ಶ್ರೀಶಾಂತ್ ಹೇಳಿದ್ದಾರೆ.
"ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಇಯಾನ್ ಮೊರ್ಗಾನ್, ಐಪಿಎಲ್ ನಲ್ಲೂ ನಾಯಕರಾಗಬೇಕು. ಇದು ತಂಡಕ್ಕೆ ಉಪಯುಕ್ತ ಬದಲಾವಣೆಯಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ, ಮೊರ್ಗಾನ್ ಕೂಡಾ ನಾಯಕರಾಗಬೇಕು"ಎಂದು ಶ್ರೀಶಾಂತ್ ಹೇಳಿದ್ದಾರೆ.
ನಾಯಕ ಕಾರ್ತಿಕ್, ಡೆಲ್ಲಿ ವಿರುದ್ದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲೂ ಮಿಂಚುವಲ್ಲಿ ವಿಫಲರಾಗಿದ್ದರು. ಕೇವಲ ಆರ್ ರನ್ ಗಳಿಸಿದ್ದ ಕಾರ್ತಿಕ್ , ಹರ್ಷಲ್ ಪಟೇಲ್ ಗೆ ವಿಕೆಟ್ ಒಪ್ಪಿಸಿದ್ದರು.