
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ನಲ್ಲೂ ಭರ್ಜರಿ ಪ್ರದರ್ಶನದ ಮೂಲಕ ಅಧಿಕಾರಯುತವಾಗಿ ಫೈನಲ್ಗೆ ಪ್ರವೇಶ ಪಡೆದಿದೆ. ತಂಡದ ಪ್ರತಿ ಆಟಗಾರನೂ ಅದ್ಭುತ ಫಾರ್ಮ್ನಲ್ಲಿರುವುದು ನಾಯಕನ ಒತ್ತಡವನ್ನು ಕಡಿಮೆ ಮಾಡಿದೆ.
ಮುಂಬೈ ಫೈನಲ್ಗೆ ಪ್ರವೇಶವನ್ನು ಪಡೆದ ಬಳಿಕ ನಾಯಕ ರೋಹಿತ್ ಶರ್ಮಾ ತಂಡದ ಯುವ ಆಟಗಾರನೋರ್ವನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆತ ತನ್ನ ಆಟವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಇದು ಮುಂಬೈಗೆ ದೊಡ್ಡ ಬಲ ತಂದಿದೆ ಎಂದಿದ್ದಾರೆ.
ರೋಹಿತ್ ಶರ್ಮಾ ಹೀಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಸೂರ್ಯ ಕುಮಾರ್ ಯಾದವ್ ಪ್ರದರ್ಶನದ ಬಗ್ಗೆ. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಈ ಬಾರಿ ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ.
"ಸೂರ್ಯ ಕುಮಾರ್ ತನ್ನ ಆಟವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಾವೆಲ್ಲರೂ ಇದನ್ನು ನೋಡಿದ್ದೀವಿ ಹಾಗೂ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಆತ ತನ್ನ ಬ್ಯಾಟಿಂಗ್ನ ಗತಿಯನ್ನು ಅಂತ್ಯದವರೆಗೂ ಕಾಪಾಡಿಕೊಲ್ಳುವ ರೀತಿ ನಿಜಕ್ಕೂ ಅದ್ಭುತ. ಇದು ಆತನಲ್ಲಿರುವ ವಿಶೇಷತೆ ಎಂದು ರೋಹಿತ್ ಶರ್ಮಾ ವಿವರಿಸಿದ್ದಾರೆ.
"ನಮ್ಮ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಹಾಗಾಗಿ ಆತನ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ. ಅದನ್ನು ಇನ್ನಷ್ಟು ಉನ್ನತಮಟ್ಟಕ್ಕೇರಿಸಲು ಆತ ಇಲ್ಲಿದ್ದಾನೆ. ಅದು ಮುಂದಿನ ದಿನಗಳಲ್ಲಿ ಆಗಲಿದೆ" ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.