
ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದ ನಂತರ ತಂಡದ ಆಟಗಾರರ ಉತ್ಸಾಹ ಹೆಚ್ಚಿದೆ. ಮುಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನವನ್ನು ನೀಡುವ ವಿಶ್ವಾಸ ತಂಡದಲ್ಲಿ ವ್ಯಕ್ತವಾಗುತ್ತಿದೆ. ಆದರೆ ತಂಡದಲ್ಲಿ ಅನುಭವಿ ಸ್ಪಿನ್ ಬೌಲರ್ಅನ್ನು ಈವರೆಗೂ ಕಣಕ್ಕಿಳಿಸದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದು ಸಿಎಸ್ಕೆ ಸಿಇಒ ಕೆ ವಿಶ್ವನಾಥನ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಸಿಎಸ್ಕೆ ತಂಡದಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಕಳೆದ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದರು. 17 ಪಂದ್ಯಗಳಲ್ಲಿ ತಾಹಿರ್ 26 ವಿಕೆಟ್ ಪಡೆದು ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ತಾಹಿರ್ ಒಂದು ಪಂದ್ಯದಲ್ಲೂ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿಲ್ಲ.
ಎನ್ಐ ಜೊತೆಗೆ ಮಾತನಾಡಿದ ಸಿಎಸ್ಕೆ ಸಿಇಒ ವಿಶ್ವನಾಥನ್, ಯುಎಇನಲ್ಲಿ ನಡೆಯುತ್ತಿರುವ ಈ ಟೂರ್ನಿಯ ಪರಿಸ್ಥಿತಿಯಲ್ಲಿ ಇಬ್ಬರು ವಿದೇಶಿ ಬ್ಯಾಟ್ಸಮನ್ಗಳು ಹಾಗೂ ಇಬ್ಬರು ವೇಗದ ಬೌಲಿಂಗ್ ಆಲ್ರೌಂಡರ್ಗಳ ಜೊತೆಗೆ ಮುಂದುವರಿಯುವುದು ಮ್ಯಾನೇಜ್ಮೆಂಟ್ಗೆ ಅನಿವಾರ್ಯವಾಗಿತ್ತು. ಆದರೆ ಪಿಚ್ಗಳು ತಿರುವು ಪಡೆದುಕೊಳ್ಳುತ್ತಿರುವ ಕಾರಣ ತಂಡದಲ್ಲಿ ಮುಂದೆ ಅವರು ಅವಕಾಶವನ್ನು ಪಡೆಯಲಿದ್ದಾರೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ನಾವು ಟೂರ್ನಿಯಲ್ಲಿ ಮುಂದುವರಿಯುತ್ತಿರುವಂತೆಯೇ ಇಮ್ರಾನ್ ತಾಹೀರ್ ಖಂಡಿತ ವಾಗಿಯೂ ತಂಡದಲ್ಲಿ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಟೂರ್ನಿಯ ದ್ವಿತಿಯಾರ್ಧದ ಅವಧಿಯಲ್ಲಿ ಚೆಂಡು ಹೆಚ್ಚಿನ ತಿರುವು ಪಡೆದುಕೊಳ್ಳುತ್ತಿದೆ. ನಾಲ್ಕು ವಿದೇಶಿ ಆಟಗಾರರಿಗೆ ಮಾತ್ರವೇ ಅವಕಾಶವಿರುವ ಕಾರಣ ಅದಕ್ಕೆ ಪೂರಕವಾಗಿ ತಂಡದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ವಿಶ್ವಾನಾಥನ್ ಹೇಳಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಕಾಮೆಂಟೇಟರ್ಗಳ ಜೊತೆಗೆ ಮಾತನಾಡಿದ ಇಮ್ರಾನ್ ತಾಹಿರ್, ತಂಡದಿಂದ ಹೊರಗಿರುವುದು ತುಂಬಾ ಕಷ್ಟದ ಕೆಲಸ. ಆದರೆ ತಂಡವಾಗಿ ಯಶಸ್ಸು ಪಡೆದುಕೊಂಡಾಗ ನಾನು ತುಂಬಾ ಅನುಭವಿಸುತ್ತಿದ್ದೇನೆ. ತಂಡ ಅತ್ಯುತ್ತಮ ಪ್ರದರ್ಶನ ನೀಡಿದಾಗ ಸಂತೋಷವನ್ನು ಪಡುತ್ತಿದ್ದೇನೆ. ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದ ಸಿಕ್ಕಿದಾಗ ಉತ್ತಮವಾಗಿ ಬಳಸಿಕೊಳ್ಳಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.