ಈ ಸೋಲಿನಿಂದ ಎಲ್ಲಾ ಸದಸ್ಯರೂ ಘಾಸಿಗೊಂಡಿದ್ದಾರೆ: ಎಂಎಸ್ ಧೋನಿ

ಮುಂಬೈ ವಿರುದ್ದ 10 ವಿಕೆಟ್ಗಳ ಹೀನಾಯ ಸೋಲು ಕಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ನಿರಾಶೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಚೆನ್ನೈ ತಂಡದ ಎಲ್ಲಾ ಸದಸ್ಯರು ಕೂಡ ಈ ಅತಿ ದೊಡ್ಡ ಸೋಲಿನಿಂದಾಗಿ ಘಾಸಿಗೊಂಡಿದ್ದಾರೆ ಎಂದು ಧೋನಿ ಹೇಳಿಕೆ ನೀಡಿದ್ದಾರೆ.
"ಇದು ಎಲ್ಲರನ್ನೂ ಘಾಸಿಗಳಿಸುತ್ತದೆ. ನೀವಿಲ್ಲಿ ನೋಡಬೇಕಿರುವುದು ಎಲ್ಲಿ ಎಡವಿದ್ದೇವೆ ಎನ್ನುವುದನ್ನು. ಈ ವರ್ಷ ನಮ್ಮ ಪಾಲಿನದ್ದಾಗಿರಲಿಲ್ಲ. ಕೇವಲ ಒಂದು ಅಥವಾ ಎರಡು ಪಂದ್ಯಗಳಲ್ಲಿ ಮಾತ್ರವೇ ನಾವು ಬ್ಯಾಟಿಂಗ್ ಹಾಗು ಬೌಲಿಂಗ್ನಲ್ಲಿ ಜೊತೆಯಾಗಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದೇವೆ" ಎಂದು ಧೋನಿ ಪ್ರತಿಕ್ರಿಯಸಿದ್ದಾರೆ.

ಕಠಿಣ ಪರಿಣಾಮ ಬೀರುತ್ತದೆ
"ಹತ್ತು ವಿಕೆಟ್ಗಳಿಂದ ಅಥವಾ ಎಂಟು ವಿಕೆಟ್ಗಳಿಂದ ಸೋಲು ಕಾಣುವುದು ನಿಜಕ್ಕೂ ಕಠಿಣವಾಗಿ ಪರಿಣಾಮವನ್ನು ಬೀರುತ್ತದೆ. ಎಲ್ಲಾ ಆಟಗಾರರು ನೋವಿನಲ್ಲಿದ್ದಾರೆ. ಆದರೆ ಎಲ್ಲರೂ ತಮ್ಮ ಉತ್ತಮ ಪ್ರಯತ್ನವನ್ನು ನಡೆಸಿದ್ದಾರೆ. ಎಲ್ಲವೂ ಪ್ರತಿ ಬಾರಿಯೂ ನಿಮ್ಮ ಪರವಾಗಿಯೇ ಇರುವುದಿಲ್ಲ. ಬಹುಶಃ ಮುಂದಿನ ಮೂರು ಪಂದ್ಯಗಳಲ್ಲಿ ನಾವು ನಮ್ಮ ಅಂತಿಮ ನಿಲುವನ್ನು ಹೇಳಲು ಪ್ರಯತ್ನಿಸುತ್ತೇವೆ" ಎಂದು ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದ ಮುಕ್ತಾಯದ ಬಳಿಕ ತಿಳಿಸಿದ್ದಾರೆ.

ಅದೃಷ್ಟವೂ ನಮಗೆ ಕೈಕೊಟ್ಟಿತು
"ಕ್ರಿಕೆಟ್ನಲ್ಲಿ ನೀವು ಕಠಿಣ ಸಂದರ್ಭದಲ್ಲಿದ್ದಾಗ ಸ್ವಲ್ಪ ಪ್ರಮಾಣದ ಅದೃಷ್ಟವೂ ನಿಮ್ಮ ಜೊತೆಗಿರಬೇಕಾಗುತ್ತದೆ. ಆದರೆ ಈ ಟೂರ್ನಿಯಲ್ಲಿ ಅದು ನಮ್ಮ ಪಾಲಿಗೆ ಇರಲೇ ಇಲ್ಲ. ನಾವು ನಿಜಕ್ಕೂ ಟಾಸ್ ಗೆದ್ದೇ ಇರಲಿಲ್ಲ. ನಾವು ಯಾವಾಗ ಎರಡನೇ ಸರದಿಯಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದೆವೋ ಆಗ ಇಬ್ಬನಿಯೇ ಇರುತ್ತಿರಲಿಲ್ಲ. ಹಾಗೂ ಯಾವಾಗ ನಾವು ಮೊದಲಿಗೆ ಬ್ಯಾಟಿಂಗ್ಗೆ ಇಳಿಯುತ್ತಿದ್ದೆವೋ ಆಗ ಇದ್ದಕ್ಕಿದ್ದ ಹಾಗೇ ಸಾಕಷ್ಟು ಇಬ್ಬನಿ ಅಂಗಳಕ್ಕೆ ಬೀಳುತ್ತಿತ್ತು" ಎಂದು ಧೋನಿ ವಿವರಿಸಿದರು.

ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಹಂತಕ್ಕೇರಿದ್ದ ಸಿಎಸ್ಕೆ
ಕಳೆದ ಹನ್ನೆರಡು ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಆವೃತ್ತಿಯಲ್ಲಿ ನಿಷೇಧಗೊಂಡು ಕಣಕ್ಕಿಳಿಯದಿರುವನ್ನು ಹೊರತುಪಡಿಸಿದರೆ ಉಳಿದಂತೆ ಆಡಿದ 10 ಆವೃತ್ತಿಯಲ್ಲೂ ಕನಿಷ್ಠ ಪ್ಲೇ ಆಫ್ ಹಂತಕ್ಕೇರಿತ್ತು. ಆದರೆ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೇರದೆ ಹೊರಹೋಗುವ ಸಂದರ್ಭ ಉಂಟಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications