
ಶುಕ್ರವಾರ ಮೃತಪಟ್ಟ ತಂದೆಯ ಸಾವಿನ ನೋವಲ್ಲೇ ಕಣಕ್ಕಿಳಿದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸತತ 5ನೇ ಗೆಲುವಿಗೆ ಕಾರಣವಾಗಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಂದೀಪ್ ಸಿಂಗ್. ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮಂದೀಪ್ ಸಿಂಗ್ ಅರ್ಧ ಶತಕವನ್ನು ಬಾರಿಸಿ 8 ವಿಕೆಟ್ಗಳ ಗೆಲುವಿಗೆ ಕಾರಣರಾಗಿದ್ದರು. ಈ ಪ್ರದರ್ಶನಕ್ಕೆ ನಾಯಕ ಕೆಎಲ್ ರಾಹುಲ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
ಕೊಲ್ಕತಾ ನೈಟ್ ರೈಡರ್ಸ್ ನೀಡಿದ 150 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ಗೆ ಮಂದೀಪ್ ಸಿಂಗ್ ಅವರ ಎಚ್ಚರಿಕೆಯ 66 ರನ್ಗಳ ಕೊಡುಗೆ ಹಾಗೂ ಕ್ರಿಸ್ ಗೇಲ್ ಸಿಡಿಸಿದ ಸ್ಪೋಟಕ 51ರನ್ಗಳ ನೆರವಿನಿಂದ ಗೆಲುವು ಸುಲಭವಾಗಿ ದಕ್ಕಿತು. ಈ ಪ್ರದರ್ಶನದಿಂದಾಗಿ ಇನ್ನೂ ಏಳು ಎಸೆತಗಳನ್ನು ಉಳಿಸಿಕೊಂಡೇ ಕೆಎಲ್ ರಾಹುಲ್ ಪಡೆ ಗೆಲುವು ಸಾಧಿಸಿತ್ತು.
ವೈಯಕ್ತಿಕವಾಗಿ ತನಗೆ ಅತಿದೊಡ್ಡ ನಷ್ಟವಾಗಿದ್ದರೂ ಮಂದೀಪ್ ಸಿಂಗ್ ತಂಡವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ ಎಂದು ಕೆಎಲ್ ರಾಹುಲ್ ಮಂದೀಪ್ ಸಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದರು.
"ಮಂದೀಪ್ ಸಿಂಗ್ ಎಂತಾ ಸ್ಥಿತೊಯಲ್ಲಿದ್ದರು ಎಂದು ಯೋಚಿಸಿದಾಗ ನಾನು ನಿಜಕ್ಕೂ ಬಾವುಕನಾಗುತ್ತೇನೆ. ತನಗೆ ಅತಿ ದೊಡ್ಡ ನಷ್ಟವಾಗಿದ್ದರೂ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಆತನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ನಮ್ಮ ತಂಡ ಕುಟುಂಬದಂತಿದ್ದು ಎಲ್ಲರಿಗೂ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.