
ಬುಧವಾರದ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಾಣುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಧೊನಿ ನೇತೃತ್ವದ ಸಿಎಸ್ಕೆ ಆರು ಪಂದ್ಯಗಳಲ್ಲಿ ನಾಲ್ಕನೆಯ ಸೋಲನ್ನು ಅನುಭವಿಸಿದೆ. ಈ ಸೋಲಿನ ಬಳಿಕ ಚೆನ್ನೈ ನಾಯಕ ಎಂಎಸ್ ಧೋನಿ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಸೋಲಿಗೆ ಚೆನ್ನೈ ನಾಯಕ ಧೋನಿಯನ್ನು ಹೊಣೆ ಮಾಡುತ್ತಿರುವ ವಿಚಾರವಾಗಿ ಓಝಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಇದು ತಂಡದ ವೈಫಲ್ಯ ಎಂದು ತಿಳಿಸಿದ್ದಾರೆ.
"ನಾನು ಕೆಕೆಆರ್ ವಿರುದ್ಧದ ಪಂದ್ಯದ ಬಗ್ಗೆ ಮಾತ್ರವೇ ಮಾತನಾಡುತ್ತಿಲ್ಲ. ಇದು ಕಳೆದ ಹಲವು ದಿನಗಳಿಂದ ನಡೆಯುತ್ತಿದೆ. ಪ್ರತಿ ಬಾರಿಯೂ ಅಭಿಮಾನಿಗಳಿಗೆ ಇಷ್ಟವಾಗದ್ದು ತಂಡದಲ್ಲಿ ನಡೆದಾಗಲೂ ಅಭಿಮಾನಿಗಳು ಧೋನಿಯ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಮನುಷ್ಯರಾಗಿ ಯೋಚನೆ ಮಾಡಿದರೆ ಓರ್ವ ವ್ಯಕ್ತಿ ಪ್ರತಿಯೊಂದಕ್ಕೂ ಹೊಣೆಗಾರನಾಗಿರಲು ಸಾಧ್ಯವಿದೆಯಾ?" ಎಂದು ಓಝಾ ಪ್ರತಿಕ್ರಿಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಓಝಾ "ತಂಡದಲ್ಲಿದ್ದ ಅನುಭವಿ ಆಟಗಾರ ಸುರೇಶ್ ರೈನಾ ಅವರ ಸ್ಥಾನವನ್ನು ತುಂಬಲು ಎಂಎಸ್ ಧೊನಿ ಪ್ರಯತ್ನವನ್ನು ನಡೆಸುತ್ತಿದ್ದಾರೆ" ಎಂದು ಹೇಳಿಕೆಯನ್ನು ನೀಡಿದ್ದಾರೆ. ಧೋನಿ ರೈನಾ ಅನುಪಸ್ಥಿತಿಯನ್ನು ತುಂಬಲು ಮೇಲಿನ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಸ್ಗೆ ಬಂದಿದ್ದ ಕೇದಾರ್ ಜಾಧವ್ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ಆಟಗಾರನಿಗೆ ತುಂಬಾ ಕಷ್ಟಕರವಾಗಿರುತ್ತದೆ" ಎಂದು ಓಝಾ ಹೇಳಿಕೆಯನ್ನು ನೀಡಿದ್ದಾರೆ.
ನಿರ್ಣಾಯಕ ಸಂದರ್ಭದಲ್ಲಿ ಚೆನ್ನೈ ತಂಡದಲ್ಲಿ ಪವರ್ ಹಿಟ್ಟರ್ಗಳಾದ ಡ್ವೇಯ್ನ್ ಬ್ರಾವೋ ಹಾಗೂ ರವೀಂದ್ರ ಜಡೇಜಾ ಬದಲಾಗಿ ಕೇದಾರ್ ಜಾಧವ್ ಕಣಕ್ಕಿಳಿದಿದ್ದರು. 21 ಎಸೆತಗಳಲ್ಲಿ 39 ರನ್ ಗಳಿಸಬೇಕಾದ ಸಂದರ್ಭದಲ್ಲಿ ಜಾಧವ್ ಬ್ಯಾಟಿಂಗ್ಗೆ ಇಳಿದಿದ್ದರು. ಆದರೆ 12 ಎಸೆತಗಳನ್ನು ಎದುರಿಸಿದ ಜಾಧವ್ ಕೇವಲ 7 ರನ್ ಗಳಿಸಲಷ್ಟೇ ಶಕ್ತವಾಗಿದ್ದು ಕೂಡ ಟೀಕೆಗೆ ಕಾರಣವಾಗಿದೆ.