
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ ಋತುರಾಜ್ ಕೊರೊನಾ ಪರೀಕ್ಷೆ ಮತ್ತೊಂದು ಬಾರಿಯೂ ಪಾಸಿಟಿವ್ ಬಂದಿದ್ದು ಅವರು ಮತ್ತೆ ಕ್ವಾರಂಟೈನ್ನಲ್ಲಿಯೇ ಮುಂದುವರಿಯಲಿದ್ದಾರೆ. ಈ ತಿಂಗಳಾರಂಭದಲ್ಲಿ ಚೆನ್ನೈ ತಂಡದಲ್ಲಿ ಕೊರೊನಾ ವೈರಸ್ ದೃಢಪಟ್ಟ ಇಬ್ಬರು ಆಟಗಾರರಲ್ಲಿ ಋತುರಾಜ್ ಗಾಯಕ್ವಾಡ್ ಕೂಡ ಒಬ್ಬರು. ಇನ್ನೋರ್ವ ಆಟಗಾರ ದೀಪಕ್ ಚಾಹರ್.
ದೀಪಕ್ ಚಾಹರ್ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಎಲ್ಲಾ ಮುನ್ನಚ್ಚರಿಕೆಯ ನಂತರ ಈಗ ತಂಡವನ್ನು ಕೂಡಿಕೊಂಡಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ ಋತುರಾಜ್ ಗಾಯಕ್ವಾಡ್ ಅವರಿಗೆ ನಡೆಸಿದ 2ನೇ ಪರೀಕ್ಷೆಯಲ್ಲೂ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಇನ್ನಷ್ಟು ದಿನಗಳ ಕಾಲ ಅವರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ.
ಋತುರಾಜ್ ಗಾಯಕ್ವಾಡ್ ಕೊರೊನಾ ಪಾಸಿಟಿವ್ ಬಂದಿದ್ದರೂ ಕೂಡ ಅವರಲ್ಲಿ ಯಾವುದೇ ಲಕ್ಷಣಗಳು ಇಲ್ಲ. ಅವರು ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ ಎಂದು ತಮಡದ ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ ಎರಡನೇ ಬಾರಿಯೂ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಐಪಿಎಲ್ ಆರಂಭಿಕ ಪಂದ್ಯದ ವೇಳೆಯಲ್ಲಿ ಅವರು ತಂಡವನ್ನು ಕೂಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಎರಡನೇ ಕೊವಿಡ್ ಪರೀಕ್ಷೆಯಲ್ಲಿ ಋತುರಾಜ್ ಗಾಯಕ್ವಾಡ್ ವರದಿ ನೆಗೆಟಿವ್ ಬರುವ ನಿರೀಕ್ಷೆಯಲ್ಲಿ ಸಿಎಸ್ಕೆ ಮ್ಯಾನೇಜ್ಮೆಂಟ್ ಇತ್ತು. ಹಾಗಾಗಿದ್ದಲ್ಲಿ ಗಾಯಕ್ವಾಡ್ ಆರಂಭಿಕ ಪಂದ್ಯಕ್ಕೂ ಮುನ್ನ ತಂಡವನ್ನು ಸೇರ್ಪಡೆಗೊಳ್ಳುವ ಸಾಧ್ಯತೆಯಿತ್ತು. ಅದರೆ ಇತ್ತೀಚಿನ ವರದಿ ಸಿಎಸ್ಕೆ ಪಾಲಿಗೆ ನಿರಾಸೆಯನ್ನು ತಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದಾರೆ. ಸೆಪ್ಟೆಂಬರ್ 19ರಂದು ಅಬುದಾಬಿಯಲ್ಲಿ ಈ ಪಂದ್ಯ ನಡೆಯಲಿದ್ದು ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳು ಈ ಆವೃತ್ತಿಯ ಮೊದಲ ಪಂದ್ಯದಲ್ಲೂ ಎದುರಾಳಿಗಳಾಗಿವೆ.