
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ವಿಲನ್ ಆಗಿರುವ ಕೇದಾರ್ ಜಾಧವ್ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ. ಗೆಲ್ಲುವ ಹಂತದಲ್ಲಿದ್ದ ಸಿಎಸ್ಕೆ, ಕೊನೆಯಲ್ಲಿ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ 10 ರನ್ಗಳ ಸೋಲು ಕಂಡಿತು.
ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಉತ್ತಮ ಅಡಿಪಾಯ ಹಾಕಿಕೊಟ್ಟಾಗ ಸಿಎಸ್ಕೆ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಬ್ಬರೂ ಕಡಿಮೆ ರನ್ ಅಂತರದಲ್ಲಿ ನಿರ್ಗಮಿಸಿದಾಗ ಚೆನ್ನೈ ತಂಡ ತತ್ತರಿಸಿತು. ಸ್ಯಾಮ್ ಕರ್ರನ್ 11 ಎಸೆತಗಳಲ್ಲಿ 17 ರನ್ ಗಳಿಸಿ ಜಯವನ್ನು ಮತ್ತಷ್ಟು ಹತ್ತಿರ ತಂದರು.
ಆದರೆ ಧೋನಿ (12 ಎಸೆತಗಳಲ್ಲಿ 11 ರನ್) ನಿಧಾನಗತಿಯಲ್ಲಿ ಆಡಿ ಔಟಾದ ಬಳಿಕ ಅನುಭವಿ ಆಟಗಾರರಾದ ರವೀಂದ್ರ ಜಡೇಜಾ ಅಥವಾ ಡ್ವೇಯ್ನ್ ಬ್ರಾವೋ ಅವರನ್ನು ಕಳುಹಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆಗ ಸಿಎಸ್ಕೆಗೆ 21 ಎಸೆತಗಳಲ್ಲಿ 38 ರನ್ ಬೇಕಿತ್ತು.
ಆದರೆ ನಿರೀಕ್ಷೆ ಹುಸಿಗೊಳಿಸಿದ ತಂಡ ಆರನೇ ಕ್ರಮಾಂಕಕ್ಕೆ ಕೇದಾರ್ ಜಾಧವ್ ಅವರನ್ನು ಕಳುಹಿಸಿತ್ತು. ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜಾಧವ್ ಅದನ್ನು ಮುಂದುವರಿಸಿದ್ದರು. 12 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಸಿಎಸ್ಕೆ ಸೋಲಿಗೆ ಪ್ರಮುಖ ಕಾರಣರಾದರು.
ಜಡೇಜಾ ಮತ್ತು ಬ್ರಾವೋ ಅವರಿಗಿಂತ ಮೊದಲು ಜಾಧವ್ ಅವರನ್ನು ಕಳುಹಿಸಿದ್ದಕ್ಕೆ ಕಾರಣ ಏನೆಂದು ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದಾರೆ.
'ಕೇದಾರ್ ಜಾಧವ್ ಅವರು ಸ್ಪಿನ್ನರ್ಗೆ ಚೆನ್ನಾಗಿ ಆಡುತ್ತಾರೆ ಮತ್ತು ಅವರ ಮೇಲೆ ಸವಾರಿ ಮಾಡುತ್ತಾರೆ ಎಂದು ನಾವು ಆಲೋಚಿಸಿದ್ದೆವು. ಜಡೇಜಾ ಕೊನೆಯಲ್ಲಿ ಬಂದು ಫಿನಿಶ್ ಮಾಡಬಲ್ಲರು ಎನ್ನುವುದು ನಮ್ಮ ಲೆಕ್ಕಾಚಾರ. ಆದರೆ ಕೊನೆಯಲ್ಲಿ ದೊಡ್ಡ ಮಟ್ಟದ ಹೊಣೆ ಬಿದ್ದಿತು ಮತ್ತು ಅದನ್ನು ತಲುಪಲು ನಮ್ಮಿಂದ ಸಾಧ್ಯಾಗಲಿಲ್ಲ' ಎಂದು ಫ್ಲೆಮಿಂಗ್ ಹೇಳಿದ್ದಾರೆ.
'ನಮ್ಮ ಬಳಿ ಬಹಳ ಬ್ಯಾಟಿಂಗ್ ಸಂಪನ್ಮೂಲಗಳಿವೆ. ಕೇದಾರ್ ಜಾಧವ್ ಭಾರತದ ಕೊನೆಯ ಮಧ್ಯಮ ಕ್ರಮಾಂಕದ ಆಟಗಾರ. ನಾವು ಅನೇಕ ವಿಭಿನ್ನ ದಾರಿಗಳನ್ನು ಆಯ್ಕೆ ಮಾಡಬಹುದಾಗಿತ್ತು. ಇಂದು ಕೇದಾರ್ ಜಾಧವ್ ಕೆಲವು ಚೆಂಡುಗಳನ್ನು ಎದುರಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ನಿಮ್ಮ ಬಳಿ ಅನೇಕ ಬ್ಯಾಟಿಂಗ್ ಪ್ರತಿಭೆಗಳನ್ನು ಆಯ್ಕೆ ಮಾಡುವ ಅವಕಾಶವಿದ್ದಾಗ ಆಟಗಾರರನ್ನು ವಿಭಿನ್ನ ರೀತಿ ಬಳಸಿಕೊಳ್ಳಬಹುದು. ನಾವು ಕೂಡ ಹಾಗೆಯೇ ಪ್ರಯತ್ನಿಸಿದ್ದೆವು. ಆದರೆ ಅದಕ್ಕೆ ಹಿನ್ನಡೆಯಾಯಿತು' ಎಂದು ತಿಳಿಸಿದ್ದಾರೆ.