
ನವದೆಹಲಿ: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಬಲಿಷ್ಠ ವಾಪಸ್ಸಾತಿಯ ಸುಳಿವು ನೀಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಹೋಗಿದ್ದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಜಡೇಜಾ ಸರಣಿಯಿಂದ ಹೊರ ಬಿದ್ದಿದ್ದರು. ಅಲ್ಲಿಂದ ಯಾವುದೇ ಪಂದ್ಯಗಳಲ್ಲಿ ಜಡೇಜಾ ಕಣಕ್ಕಿಳಿದಿರಲಿಲ್ಲ.
ಏಪ್ರಿಲ್ 9ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಆರಂಭಗೊಳ್ಳಲಿದೆ. ಕಳೆದ ಡಿಸೆಂಬರ್ನಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ರವೀಂದ್ರ ಜಡೇಜಾ ಸದ್ಯ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಪರ ಬಲಿಷ್ಠ ವಾಪಸ್ಸಾತಿಯ ಸುಳಿವನ್ನು ಜಡ್ಡು ನೀಡಿದ್ದಾರೆ.
'ಕೆಲ ದಿನಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದೇನೆ. ಶಸ್ತ್ರ ಚಿಕಿತ್ಸೆ ಮುಕ್ತಾಯವಾಗಿದೆ. ಶೀಘ್ರ ಬಲಿಷ್ಠನಾಗಿ ಮರಳಲಿದ್ದೇನೆ' ಎಂದು ಕಳೆದ ಜನವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಡೇಜಾ ಬರೆದುಕೊಂಡಿದ್ದರು. ಏಪ್ರಿಲ್ 2ರಂದು ಜಡೇಜಾ, ಸಿಎಸ್ಕೆ ನಾಯಕ ಎಂಎಸ್ ಧೋನಿ ಜೊತೆಗಿರುವ ಚಿತ್ರ ಹಂಚಿಕೊಂಡಿದ್ದಾರೆ.
'ನಾನು ಯಾವತ್ತು ಈತನನ್ನು ಭೇಟಿಯಾಗುತ್ತೇನೊ ಅವಾಗೆಲ್ಲ ನಾನೀತನನ್ನು ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ ಎನ್ನುವಷ್ಟು ಉತ್ಸಾಹ ನನ್ನಲ್ಲಿರುತ್ತದೆ. 2009ರಲ್ಲಿ ಮೊದಲ ಬಾರಿ ಭೇಟಿಯಾದಾಗ ಯಾವ ಭಾವನೆ ಉಂಟಾಗಿತ್ತೋ ಅದೇ ಭಾವನೆ ಈಗಲೂ ಆಗುತ್ತಿದೆ' ಎಂದು ಜಡೇಜಾ ತಾನು ಧೋನಿ ಜೊತೆಗಿರುವ ಚಿತ್ರದಲ್ಲಿ ಬರೆದುಕೊಂಡಿದ್ದಾರೆ.