
14ನೇ ಆವೃತ್ತಿಯ ಐಪಿಎಲ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಘಟ್ಟದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಾಟಕೀಯವಾಗಿ ಕುಸಿದು ಗೆಲ್ಲಬಹುದಾಗಿದ್ದ ಪಂದ್ಯವನ್ನು 10 ರನ್ಗಳಿಂದ ಸೋತಿತ್ತು. ಇದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿತ್ತು. ಈ ಸೋಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹಮಾಲೀಕ, ನಟ ಶಾರೂಖ್ ಖಾನ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಇದಕ್ಕೆ ಕೆಕೆಆರ್ ತಂಡದ ಆಲ್ರೌಂಡರ್ ಆಂಡ್ರೆ ರಸ್ಸೆಲ್ ಪ್ರತಿಕ್ರಿಯೆ ನೀಡಿದ್ದಾರೆ.
"ಶಾರೂಖ್ ಖಾನ್ ಅವರ ಟ್ವೀಟ್ಅನ್ನು ನಾನು ಬೆಂಬಲಿಸುತ್ತೇನೆ. ಆದರೆ ಅಂತಿಮವಾಗಿ ಇದು ಕ್ರಿಕೆಟ್ ಆಟ. ಪಂದ್ಯ ಸಂಪೂರ್ಣವಾಗುವವರೆಗೂ ಗೆಲುವು ಖಾತ್ರಿಯಿಲ್ಲ" ಎಂದು ಆಂಡ್ರೆ ರಸ್ಸೆಲ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಂತಿಮ ಹಂತದಲ್ಲಿ ಆಂಡ್ರೆ ರಸ್ಸೆಲ್ ಕ್ರೀಸ್ನಲ್ಲಿ ಇದ್ದರು. ಆದರೆ ರನ್ಗಳಿಸಲು ವಿಫಲವಾದ ಅವರು ಬಳಿಕ 9 ಎಸೆತಗಳಲ್ಲಿ 15 ರನ್ಗಳ ಅವಶ್ಯಕತೆಯಿರುವಾಗ ಟ್ರೆಂಟ್ ಬೋಲ್ಟ್ಗೆ ವಿಕೆಟ್ ಒಪ್ಪಿಸಿದ್ದರು.
"ನಾವಿನ್ನು ಕೂಡ ಆತ್ಮವಿಶ್ವಾಸವನ್ನು ಹೊಂದಿದ್ದೇವೆ. ಸೋಲಿನ ಹೊರತಾಗಿಯೂ ನಾವು ಅತ್ಯುತ್ತಮ ಕ್ರಿಕೆಟ್ಅನ್ನು ಆಡಿದ್ದೇವೆ. ನನಗೆ ತಂಡದ ಆಟಗಾರರ ಬಗ್ಗೆ ಹೆಮ್ಮೆಯಿದೆ. ಖಂಡಿತಾ ನಿಮ್ಮನ್ನು ನಾವು ನಿರಾಶೆಗೊಳಿಸಿದ್ದೇವೆ. ಆದರೆ ದಾರಿ ಇಲ್ಲಿಗೆ ಅಂತ್ಯವಾಗಿಲ್ಲ. ಇದು ಕೇವಲ ಎರಡನೇ ಪಂದ್ಯ. ಈ ಸೋಲಿನಿಂದ ನಾವು ಪಾಠ ಕಲಿಯುತ್ತೇವೆ" ಎಂದು ಆಂಡ್ರೆ ರಸ್ಸೆಲ್ ಪ್ರತಿಕ್ರಿಯಿಸಿದ್ದಾರೆ.
"ಇದು ಕ್ರಿಕೆಟ್ನ ಒಂದು ಭಾಗ. ನಾನು ನೂರಾರು ಟಿ20 ಪಂದ್ಯಗಳನ್ನು ಆಡಿದ್ದೇನೆ. ಪಂದ್ಯದಲ್ಲಿ ಅತ್ಯುತ್ತಮ ಆಟದೊಂದಿಗೆ ಗೆಲುವಿನತ್ತ ಮುಖಮಾಡಿರುವ ತಂಡ ಹಠಾತ್ ಆಗಿ ವಿಕೆಟ್ ಕಳೆದುಕೊಂಡಾಗ ಹೊಸ ಆಟಗಾರರು ಬಂದು ರನ್ಗಳಿಸಲು ಪರದಾಡಿ ಸೋಲು ಕಂಡ ಸಾಕಷ್ಟು ಪಂದ್ಯಗಳನ್ನು ಕಂಡಿದ್ದೇವೆ. ನಿನ್ನೆ ನಡೆದ ಪಂದ್ಯವೂ ಅದೇ ರೀತಿ ಆಗಿದೆ" ಎಂದಿದ್ದಾರೆ ಆಂಡ್ರೆ ರಸ್ಸೆಲ್.
ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 153 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಕೆಕೆಆರ್ ಅತ್ಯುತ್ತಮ ಸ್ಥಿತಿಯಲ್ಲಿತ್ತು. 122 ರನ್ಗಳಿಗೆ 5 ವಿಕೆಟ್ ಗಳೆದುಕೊಂಡಿದ್ದ ಕೆಕೆಆರ್ಗೆ ಅಂತಿಮ ಐದು ಓವರ್ಗಳಲ್ಲಿ ಅಗತ್ಯವಿದ್ದಿದ್ದು ಕೇವಲ 31 ರನ್ಗಳು ಮಾತ್ರ. ಕ್ರೀಸ್ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ಆಂಡ್ರೆ ರಸ್ಸೆಲ್ ಅವರಂತಾ ಅನುಭವಿ ಹಾಗೂ ಸ್ಪೋಟಕ ಆಟಗಾರರ ಇದ್ದರು. ಆದರೆ ಅಂತಿಮವಾಗಿ 10 ರನ್ಗಳ ಅಂತರದಿಂದ ಕೆಕೆಆರ್ ಸೋಲು ಕಂಡಿತ್ತು