
ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ತಂಡ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಭರ್ಜರಿ 92 ರನ್ ದಾಖಲಿಸಿದರು. ಮತ್ತೊಂದೆಡೆ ಎದುರಾಳಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ಈ ಪಂದ್ಯದಲ್ಲಿ 61 ರನ್ಗಳನ್ನು ಬಾರಿಸಿ ಮಿಂಚಿದರು.
ಟೀಮ್ ಇಂಡಿಯಾ ಆಟಗಾರರ ಈ ಪ್ರದರ್ಶನಕ್ಕೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಂಜುಂ ಚೋಪ್ರ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಆಟಗಾರರ ಫಾರ್ಮ್ ಬಹಳ ಪ್ರಮುಖವಾಗಿದೆ ಎಂದು ಅಂಜುಂ ಜೋಪ್ರ ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂಜುಂ ಚೋಪ್ರ "ಮುಂಬರುವ ಟಿ20 ವಿಶ್ವಕಪ್ಅನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಧವನ್ ಹಾಗೂ ರಾಹುಲ್ ಫಾರ್ಮ್ಗೆ ಮರಳಿರುವುದು ಅದ್ಭುತವಾದ ಸಂಗತಿ" ಎಂದು ಹೇಳಿದ್ದಾರೆ. ಇನ್ನು ಕೆಎಲ್ ರಾಹುಲ್ ನೇತೃತ್ವದ ತಂಡ 195 ರನ್ಗಳನ್ನು ಬಾರಿಸಿಯೂ ಸೋಲು ಕಾಣುವುದನ್ನು ನೋಡಲು ಬೇಸರವಾಯಿತು ಎಂದಿದ್ದಾರೆ.
"ನೀವು ಸಾಧ್ಯವಾದಷ್ಟು ರನ್ಗಳನ್ನು ಗಳಿಸಬೇಕು. ಆದರೆ ತಂಡದ ಗೆಲುವಿಗೆ ಎಲ್ಲಾ 10 ಆಟಗಾರರು ಸಮನಾದ ಪ್ರದರ್ಶನವನ್ನು ನೀಡಬೇಕು. ಆದರೆ ಏಕಾಂಗಿಯಾಗಿ ನೀವು ಗೆಲ್ಲಲು ಸಾಧ್ಯವಿಲ್ಲ. ಈಗ ರಾಹುಲ್ 195 ರನ್ಗಳಿಸಿದ ನಂತರವೂ ಸೋಲಿನ ಬಗ್ಗೆ ಚಿಂತಿಸಬೇಕಾಗುತ್ತದೆ" ಎಂದು ಅಂಜುಂ ಚೋಪ್ರ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ಈಗ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು ಒಂದು ಗೆಲುವು ಸಾಧಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ರಾಹುಲ್ ಬಳಗದ ಚಿಂತೆ ಹೆಚ್ಚಿಸಿದೆ.