
ಅಬುಧಾಬಿ: ಪಂಜಾಬ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಿಂದ ಈಗಾಗಲೇ ಹೊರ ಬಿದ್ದಿದೆ. ನಾಯಕ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಪಂಜಾಬ್ ಪ್ಲೆಆಫ್ಸ್ ಅವಕಾಶ ಕಳೆದುಕೊಂಡಿದೆ. ಪಂಜಾಬ್ ಪ್ಲೇ ಆಫ್ಸ್ನಿಂದ ಹೊರ ಬಿದ್ದ ಬೆನ್ನಲ್ಲೇ ರಾಹುಲ್ ಕೂಡ ಪ್ಲೇ ಆಫ್ಸ್ ರೇಸ್ನಿಂದ ಹೊರ ಬಿದ್ದಂತಾಗಿದೆ.
ಪಂಜಾಬ್ ಕಿಂಗ್ಸ್ ತಂಡ ಕೊನೇ ಪಂದ್ಯ ಆಡಿದ್ದು ಅಕ್ಟೋಬರ್ 7ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ಪಂದ್ಯದಲ್ಲಿ ಪಂಜಾಬ್ 6 ವಿಕೆಟ್ ಗೆಲುವನ್ನಾಚರಿಸಿತ್ತು. ಆದರೆ ಆ ಪಂದ್ಯ ಗೆದ್ದ ನಂತರವೂ ಪಂಜಾಬ್ಗೆ ಪ್ಲೇ ಆಫ್ಸ್ ಅವಕಾಶ ಇರಲಿಲ್ಲ. ಕಾರಣ ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿದ್ದ ಪಂಜಾಬ್ ಡೇಂಜರ್ ಝೋನ್ನಲ್ಲಿತ್ತು.
ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪ್ಲೇ ಆಫ್ಸ್ನಿಂದ ಹೊರ ಬಿದ್ದ ಬಳಿಕ ಕ್ರಿಕೆಟ್ ವಲಯದಲ್ಲಿ ಕೆಎಲ್ ರಾಹುಲ್ ಬಗ್ಗೆ ಬೇರೆ ಬೇರೆ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಪ್ಲೇ ಆಫ್ಸ್ನಿಂದ ಪಂಜಾಬ್ ಹೊರ ಬಿದ್ದಾಗ ರಾಹುಲ್ ಮಾಡಿದ್ದ ಟ್ವೀಟ್ ಹೀಗೆ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದೆ.
ರಾಹುಲ್ ಮುಂದಿನ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿ ಸೇರಿಕೊಳ್ಳಲಿದ್ದಾರೆ. ಆರ್ಸಿಬಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಎರಡು ಕಾರಣಗಳಿವೆ; 1 ಆರ್ಸಿಬಿ ನಾಯಕತ್ವದಿಂದ ಮುಂದಿನ ವರ್ಷ ಕೊಹ್ಲಿ ಕೆಳಗಿಳಿಯಲಿದ್ದಾರೆ, 2 ಮುಂದಿನ ವರ್ಷ ಮೆಗಾ ಆಕ್ಷನ್ ನಡೆಯಲಿದೆ. ಈ ವೇಳೆ ಎಲ್ಲಾ ತಂಡಗಳು ತಮ್ಮ ತಂಡದಲ್ಲಿ ಕೆಲವೇ ಆಟಗಾರರನ್ನು ಉಳಿಸಿ ಉಳಿದೆಲ್ಲರನ್ನು ಹರಾಜು ಕಣಕ್ಕೆ ಇಳಿಸಲಿವೆ.
ಅಕ್ಟೋಬರ್ 9ರಂದು ಟ್ವೀಟ್ ಮಾಡಿದ್ದ ರಾಹುಲ್, "ಇಲ್ಲಿ ಕಲಿಯಲು ಬಹಳಷ್ಟಿದೆ. ನನಗೆ ನನ್ನ ತಂಡದ ಆಟಗಾರರ ಬಗ್ಗೆ ಹೆಮ್ಮೆಯಿದೆ. ನಾವೊಂದು ತಂಡವಾಗಿ ಹೋರಾಡಿದೆವು ಮತ್ತು ಯಾವಾಗಲೂ ನಮ್ಮ ಬೆಸ್ಟ್ ಆಟ ನೀಡಲು ಪ್ರಯತ್ನಿಸಿದೆವು. ತಂಡ ಮುನ್ನಡೆಸುವುದು ಹೆಮ್ಮೆಯ ಸಂಗತಿಯಾಗಿತ್ತು. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು," ಎಂದು ಬರೆದುಕೊಂಡಿದ್ದರು. ಇದರರ್ಥ, ಈ ಬಾರಿಯ ಸೀಸನ್ನಲ್ಲಿ ಪಂಜಾಬ್ ಹೋರಾಟ ಮುಗಿದಿದೆ ಅನ್ನೋದು ಹೌದು. ಅದರ ಜೊತೆಗೆ ಇದು ಪಂಜಾಬ್ ಪರ ರಾಹುಲ್ ಆಡುತ್ತಿರುವ ಕಡೇ ಸೀಸನ್ನೇ ಅನ್ನೋ ಅನುಮಾನ ಕೂಡ ಮೂಡಿಸಿದೆ. ಯಾವುದಕ್ಕೂ ಕಾಲ ಉತ್ತರಿಸಬೇಕಿದೆ.