
1. ವಿಜಯ್ ಶಂಕರ್
ಟೀಮ್ ಇಂಡಿಯಾದಿಂದ ಹೊರ ಬಿದ್ದ ನಂತರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಲಯ ಕಳೆದುಕೊಂಡಿರುವ ಆಲ್ ರೌಂಡರ್ ವಿಜಯ್ ಶಂಕರ್ 2020ರ ಐಪಿಎಲ್ ಆವೃತ್ತಿಯಲ್ಲಿ ಮಕಾಡೆ ಮಲಗಿದ್ದರು. ಆದರೆ ನಂತರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳು ನಾಡಿನ ಪರ ಈತ ನೀಡಿದ ಉತ್ತಮ ಪ್ರದರ್ಶನ ಗುಜರಾತ್ ಟೈಟನ್ಸ್ ತಂಡದಲ್ಲಿ ಈ ಬಾರಿ ಅವಕಾಶವನ್ನು ಗಿಟ್ಟಿಸಿಕೊಟ್ಟಿತ್ತು. ಆದರೆ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುವ ಅವಕಾಶ ಪಡೆದ ಶಂಕರ್ 19 ರನ್ ಗಳಿಸಿ ವಿಫಲರಾಗಿದ್ದಾರೆ. ಹೀಗಾಗಿ ವಿಜಯ್ ಶಂಕರ್ ಮುಂದಿನ ಮಿನಿ ಹರಾಜಿಗೂ ಮುನ್ನ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

2. ಜಯಂತ್ ಯಾದವ್
2015ರಿಂದ ಐಪಿಎಲ್ ಆಡುತ್ತಿರುವ ಜಯಂತ್ ಯಾದವ್ ಕೇವಲ 19 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಸಿಕ್ಕ ಅವಕಾಶಗಳಿಗೆ ತಕ್ಕಂಥ ವಿಕೆಟ್ ಕಬಳಿಸಿದ್ದಾರೆ ಹಾಗೂ 8ಕ್ಕಿಂತ ಕಡಿಮೆ ಎಕಾನಮಿ ದರವನ್ನು ಹೊಂದಿದ್ದಾರೆ. ಹೀಗೆ ಸಿಕ್ಕ ಕಡಿಮೆ ಅವಕಾಶದಲ್ಲಿಯೂ ಚೆನ್ನಾಗಿಯೇ ಪ್ರದರ್ಶನ ನೀಡಿರುವ ಜಯಂತ್ ಯಾದವ್ ಅವರನ್ನು ಈ ಬಾರಿ ಗುಜರಾತ್ ಟೈಟನ್ಸ್ 1.70 ಕೋಟಿಗೆ ಖರೀದಿಸಿತಾದರೂ ತಂಡದಲ್ಲಿ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಇದ್ದ ಕಾರಣ ಇವರಿಗೆ ಕಣಕ್ಕಿಳಿಯುವ ಅವಕಾಶವೇ ಸಿಗಲಿಲ್ಲ. ಆದರೆ ಟೂರ್ನಿಯ ಅಂತ್ಯದಲ್ಲಿ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ ಅವಕಾಶ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ನೀಡಿದ ಕಾರಣ ಜಯಂತ್ ಯಾದವ್ ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿವೆ.

3. ಡೊಮಿನಿಕ್ ಡ್ರೇಕ್ಸ್
ವೆಸ್ಟ್ ಇಂಡೀಸ್ ತಂಡದ ಪ್ರತಿಭಾನ್ವಿತ ಆಲ್ ರೌಂಡರ್ ಡೊಮಿನಿಕ್ ಡ್ರೇಕ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆಯಲಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಈತನಿಗೆ ಗುಜರಾತ್ ಟೈಟಾನ್ಸ್ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಗದೇ ಇರಲು ಪ್ರಮುಖ ಕಾರಣ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದು. ಹೀಗಾಗಿ ಡೊಮಿನಿಕ್ ಡ್ರೇಕ್ಸ್ ಅಗತ್ಯತೆ ತಂಡಕ್ಕೆ ತೀರಾ ಕಡಿಮೆಯಿದ್ದು, ಮುಂಬರುವ ಮಿನಿ ಹರಾಜಿನಲ್ಲಿ ತಂಡದಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications
