
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಈ ಬಾರಿಯ ಟೂರ್ನಿಯ ಉಳಿದ ಪಂದ್ಯಗಳಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಬುಧವಾರ ಸಿಎದಸ್ಕೆ ಫ್ರಾಂಚೈಸಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದೆ. ವೈದ್ಯಕೀಯ ಕಾರಣದಿಂದಾಗಿ ಈ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಆದರೆ ಈ ಬೆಳವಣಿಗೆಯ ಬಗ್ಗೆ ಸ್ವತಃ ರವೀಂದ್ರ ಜಡೇಜಾ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಹಾಗೂ ರವೀಂದ್ರ ಜಡೇಜಾ ಮಧ್ಯೆ ಒಡಕು ಮೂಡಿದೆ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ.
ಈ ಬೆಳವಣಿಗೆಗಳ ನಂತರ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕೆಲ ಕುತೂಹಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವ ಸಂದರ್ಭದಲ್ಲಿ ಆಕಾಶ್ ಚೋಪ್ರ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ಆವೃತ್ತಿಯಿಂದ ಬಹುಶಃ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮುಂದುವರಿಯುವುದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.
ರೈನಾ ಉದಾಹರಣೆ ನೀಡಿದ ಚೋಪ್ರ: "ಚೆನ್ನೈ ಪರವಾಗಿ ಜಡೇಜಾ ಮುಂದಿನ ಪಂದ್ಯಗಳನ್ನು ರವೀಂದ್ರ ಜಡೇಜಾ ಆಡುವುದಿಲ್ಲ ಎಂದು ನಾನು ಈ ಮೊದಲೇ ಹೇಳಿದ್ದೆ. ಆದರೆ ಈಗ ನನಗೆ ಆತ ಮುಂದಿನ ವರ್ಷದಲ್ಲಿಯೂ ಚೆನ್ನೈ ತಮಡದ ಪರವಾಗಿ ಆಡುವುದಿಲ್ಲ ಎಂದು ಭಾಸವಾಗುತ್ತಿದೆ" ಎಂದಿದ್ದಾರೆ ಆಕಾಶ್ ಚೋಪ್ರ. ತನ್ನ ಈ ಮಾತಿಗೆ ಚೋಪ್ರ ಸುರೇಶ್ ರೈನಾ ಅವರ ಉದಾಹರಣೆಯನ್ನು ನೀಡಿದ್ದಾರೆ.
ರೈನಾಗೂ ಸುಳಿವೇ ನೀಡಿರಲಿಲ್ಲ: "ಈ ರೀತಿ ಈ ಹಿಂದೆ ಹಲವು ಬಾರಿ ಸಿಎಸ್ಕೆ ಫ್ರಾಂಚೈಸಿಯಲ್ಲಿ ಆಗಿದೆ. ಆಟಗಾರರಿಗೆ ಗಾಉವಾಗಿರುವ ಬಗ್ಗೆ ಯಾವುದೇ ಸ್ಪಷ್ಟತೆಗಳು ಇರುವುದಿಲ್ಲ. ಅದಾದ ಬಳಿಕ ಆಟಗಾರರು ಆಡುವುದಿಲ್ಲ. 2021ರಲ್ಲಿ ಸುರೇಶ್ ರೈನಾ ಒಂದು ಹಂತದವರೆಗೆ ಆಡಿದ್ದರು. ನಂತರ ಅವರಿಗೆ ಅವಕಾಶ ಅಂತ್ಯವಾಗಿತ್ತು. ಅಲ್ಲಿಗೆ ಟಾಟಾ" ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ.
ಸಿಎಸ್ಕೆ ತಂಡಕ್ಕೆ ಸಮಸ್ಯೆಯಾಗಲಿದೆ: "ನನಗೆ ಜಡೇಜಾ ಅವರಿಗೆ ಏನಾಯ್ತು ಎಂದು ತಿಳಿದಿಲ್ಲ. ಆದರೆ ಸಿಎಸ್ಕೆ ತಂಡಕ್ಕೆ ಜಡೇಜಾ ಅವರ ಅಲಭ್ಯತೆ ಸಮಸ್ಯೆಯಾಗಲಿದೆ" ಎಂದು ಚೋಪ್ರ ಅಭಿಪ್ರಾಯಪಟ್ಟಿದ್ದಾರೆ. ಇನ್ನು ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪರಸ್ಪರರನ್ನು ಅನ್ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನಲು ಮತ್ತೊಂದು ಪ್ರಮುಖ ಸಾಕ್ಷಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಸಿಎಸ್ಕೆ ತಂಡದ ದುಬಾರಿ ಆಟಗಾರ: ಐಪಿಎಲ್ 2022ರ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಸಿಎಸ್ಕೆ ತಂಡದ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. 16 ಕೋಟಿಗೆ ಸಿಎಸ್ಕೆ ಜಡೇಜಾ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಅಲ್ಲದೆ ತಂಡದ ನಾಯಕನನ್ನಾಗಿಯೂ ನೇಮಕಗೊಳಿಸಲಾಗಿತ್ತು. ಆದರೆ ಸತತ ವೈಫಲ್ಯವನ್ನು ಅನುಭವಿಸಿದ ಕಾರಣದಿಂದಾಗಿ ಅಲ್ಲದೆ ತಂಡ ಕೂಡ ಸೋಲಿನ ಸುಳಿಗೆ ಸಿಲುಕಿದ ಹಿನ್ನೆಲೆಯಲ್ಲಿ ನಾಯಕತ್ವದಿಂದ ಜಡೇಜಾ ಕೆಳಗಿಳಿದಿದ್ದರು. ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.