
ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಟಿ20 ವಿಶ್ವಕಪ್
ಭಾರತದ ಇಬ್ಬರು ಪ್ರಮುಖ ಸ್ಪಿನ್ನರ್ಗಳಾದ ಯುಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ಐಪಿಎಲ್ನಲ್ಲಿ ತಮ್ಮ ತಮ್ಮ ಫ್ರಾಂಚೈಸಿಗಳ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರವಾಗಿ ಯುಜುವೇಂದ್ರ ಚಾಹಲ್ ಅಮೋಘ ಪ್ರದರ್ಶನ ನೀಡುತ್ತಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕುಲ್ದೀಪ್ ನಿರಂತರವಾಗಿ ಮ್ಯಾಚ್ ವಿನ್ನಿಂಗ್ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಈ ಬಾರಿಯು ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಸ್ಪಿನ್ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

ಈ ಜೋಡಿ ಜೊತೆಯಾಗಿ ಆಡಲು ಸಾಧ್ಯವಿಲ್ಲ
ಆಸ್ಟ್ರೇಲಿಯಾದ ಪಿಚ್ಗಳು ಸ್ಪಿನ್ನರ್ಗಳಿಗೆ ಸಹಕಾರಿಯಾಗಿರುವುದಿಲ್ಲ. ಅಲ್ಲದೆ ರವೀಂದ್ರ ಜಡೇಜಾ ಹಾಗೂ ವಾಶಿಂಗ್ಟನ್ ಸುಂದರ್ ಇಬ್ಬರು ಸ್ಪಿನ್ ಆಲ್ರೌಂಡರ್ಗಳು ಟೀಮ್ ಇಂಡಿಯಾದಲ್ಲಿದ್ದಾರೆ. ಹಾಗಾಗಿ ಈ ಇಬ್ಬರು ಆಟಗಾರರು ಜೊತೆಯಾಗಿ ಕಣಕ್ಕಿಳಿಯುವುದು ಅಸಂಭವ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ. "ನಾನು ವಾಸ್ತವವನ್ನು ಮಾತನಾಡುತ್ತಿದ್ದೇನೆ. ಜಡೇಜಾ ವಿಶ್ವಕಪ್ ತಂಡದಲ್ಲಿ ಇರಲಿದ್ದಾರೆ. ಅವರು ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ ಮಾಡುತ್ತಾರೆ. ವಾಶಿಂಗ್ಟನ್ ಸುಂದರ್ ಅವರನ್ನು ಕೂಡ ಆಡಿಸುವ ಬಗ್ಗೆ ಮ್ಯಾನೇಜ್ಮೆಂಟ್ ಯೋಚನೆ ಮಾಡಬಹುದು. ಆತ ಕೂಡ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ ಹಾಗೂ ಬ್ಯಾಟಿಂಗ್ ಕೂಡ ನಡೆಸುತ್ತಾರೆ. ಪಂದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವುದರಿಂದಾಗಿ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಏಕದಿನ ವಿಶ್ವಕಪ್ಗೆ ಭರವಸೆ
ಟಿ20 ವಿಶ್ವಕಪ್ನಲ್ಲಿ ಕುಲ್ದೀಪ್ ಯಾದವ್ ಜೋಡಿಗೆ ಅವಕಾಶ ದೊರೆಯುವ ಸಾಧ್ಯತೆ ಕಡಿಮೆಯಿದೆ ಎಂಬುದನ್ನು ಆಕಾಶ್ ಚೋಪ್ರ ವಿವರಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಈ ಜೋಡಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ಭರವಸೆಯಾಗಲಿದ್ದಾರೆ ಎಂದಿದ್ದಾರೆ. 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದೆ. ರವೀಂದ್ರ ಜಡೇಜಾ ಜೊತೆಗೆ ಮತ್ತಿಬ್ಬರು ಸ್ಪಿನ್ನರ್ಗಳು ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಜೋಡಿ ಈ ಟೂರ್ನಿಯಲ್ಲಿ ಜೊತೆಯಾಗಿ ಆಡುವ ಸಾಧ್ಯತೆಯಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ಕುಲ್-ಚಾ ಜೋಡಿಗೆ ಅನ್ಯಾಯವಾಗಿದೆ ಎಂದ ಚೋಪ್ರ
ಭಾರತದ ಪ್ರಮುಖ ಸ್ಪಿನ್ನರ್ಗಳಾಗಿರುವ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಫಾರ್ಮ್ ಕೊರತೆಯ ಹಿನ್ನಲೆಯಲ್ಲಿ ತಂಡದಿಂದ ಹೊರಬಿದ್ದಿದ್ದರು. ಈ ಸಂದರ್ಭದಲ್ಲಿ ಇಬ್ಬರು ಸ್ಪಿನ್ನರ್ಗಳಿಗೆ ಅನ್ಯಾಯವಾಗಿದೆ ಎಂದು ಕುಲ್ದೀಪ್ ಯಾದವ್. "ಇಬ್ಬರು ಕೂಡ ವಿಕೆಟ್ ಟೇಕರ್ಗಳಾಗಿದ್ದಾರೆ. ಇಬ್ಬರು ಕೂಡ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆದರೆ ಅವರಿಗೆ ಸ್ವಲ್ಪ ಅನ್ಯಾಯವಾಗಿದೆ ಎಂದು ನನಗೆ ಭಾಸವಾಗುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಭಾರತ ತಂಡದಲ್ಲಿ ಸ್ಥಿರವಾಗಿ ಸ್ಥಾನವನ್ನು ನೀಡಬೇಕಾಗಿತ್ತು" ಎಂದಿದ್ದಾರೆ ಆಕಾಶ್ ಚೋಪ್ರ. ಚಾಹಲ್ ಹಾಗೂ ಕುಲ್ದೀಪ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದು ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದಾರೆ.


Click it and Unblock the Notifications












