
ಐಪಿಎಲ್ನಲ್ಲಿ ಸೋಮವಾರ ಆಪ್ತ ಗೆಳೆಯರ ಮುಖಾಮುಖಿಯಾಗಲಿದೆ. ಈ ಬಾರಿಯ ಐಪಿಎಲ್ಗೆ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಸೋಮವಾರ ಕಣಕ್ಕಿಳಿಯುತ್ತಿದ್ದು ಈ ಕದನ ಕುತೂಹಲ ಮೂಡಿಸಿದೆ. ಅಲ್ಲದೆ ಇಬ್ಬರು ಆಪ್ತ ನಾಯಕರು ಈ ಎರಡು ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿದ್ದರೆ ಲಕ್ನೋ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ.
ಈ ಎರಡು ತಂಡಗಳ ಮುಖಾಮುಖಿಯ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿರುವ ಒಂದು ಪ್ರಮುಖ ಸಮಸ್ಯೆಯನ್ನು ಬೊಟ್ಟು ಮಾಡಿದ್ದಾರೆ.
ಪ್ರಮುಖ ಆಟಗಾರರಿಲ್ಲದೆ ಪರದಾಡಲಿದೆ: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ತಂಡ ಪ್ರಮುಖ ಆಟಗಾರರಿಲ್ಲದೆ ಸಮಸ್ಯೆ ಎದುರಿಸಲಿದೆ ಎಂದಿದ್ದಾರೆ ಆಕಾಶ್ ಚೋಪ್ರ. ಪ್ರಮುಖ ವಿದೇಶಿ ಆಟಗಾರರು ಆರಂಭುಕ ಪಂದ್ಯಗಳಿಗೆ ಲಭ್ಯವಾಗದ ಕಾರಣ ಲಕ್ನೋಗೆ ಹಿನ್ನಡೆಯಾಗಲಿದೆ ಎಂಬುದು ಚೋಪ್ರಾ ಅಭಿಪ್ರಾಯ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಆಕಾಶ್ ಚೋಪ್ರ "ವಿದೇಶಿ ಆಟಗಾರರು ಅಲಭ್ಯವಾಗಲಿರುವ ಕಾರಣ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹಿನ್ನಡೆಯಾಗಲಿದೆ. ಮಾರ್ಕ್ ವುಡ್ ಈ ಟೂರ್ನಿಯಲ್ಲಿ ಆಡುವುದಿಲ್ಲ. ಅವರ ಬದಲಿಗೆ ಆ್ಯಂಡ್ರೋ ಟೈ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅವರು ಕೂಡ ಲಭ್ತವಾಗಲಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ದುಶ್ಮಂತಾ ಚಮೀರಾ ಆಡಿದರೂ ಮಾರ್ಕಸ್ ಸ್ಟೋಯ್ನಿಸ್ ಈ ಪಂದ್ಯದಲ್ಲಿ ಆಡುವುದಿಲ್ಲ, ಜೇಸನ್ ಹೋಲ್ಡರ್ ಕೂಡ ಲಭ್ಯವಾಗುವುದಿಲ್ಲ. ಎವಿನ್ ಲೂಯಿಸ್ ಲಭ್ಯವಾದರೂ ಕೈಲ್ ಮೇಯರ್ಸ್ ಅಲಭ್ಯವಾಗಲಿದ್ದಾರೆ. ಹೆಚ್ಚಿನ ವಿದೇಶಿ ಆಟಗಾರರು ಈಗಾಗಲೇ ತಲುಪಿದ್ದರೂ ಈ ಪಂದ್ಯಕ್ಕೆ ಅವರು ಲಭ್ಯವಾಗಲಾರರು" ಎಂದಿದ್ದಾರೆ ಆಕಾಶ್ ಚೋಪ್ರ.
ಬೌಲಿಂಗ್ ವಿಭಾಗದಲ್ಲಿಯೂ ಇದೆ ಕೊರತೆ: ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿಲ್ಲ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ. ವೇಗದ ಬೌಲರ್ಗಳಾಗಿ ಆವೇಶ್ ಖಾನ್ ಹಾಗೂ ದುಶ್ಮಂತ ಚಮೀರಾ ಕಣಕ್ಕಿಳಿದರೆ ರವಿ ಬಿಷ್ಣೋಯ್ ಖಂಡಿತಾ ಆಡಲಿದ್ದಾರೆ. ಉಳಿದಂತೆ ಕೆ ಗೌತಮ್, ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡಾ ಜೊತೆಯಾಗಿ ಎರಡು ಓವರ್ಗಳ ಕೊಟಾವನ್ನು ಪೂರೈಸಬೇಕಿದೆ. ಅಂಕಿತ್ ರಜಪೂತ್ಗೆ 4 ಓವರ್ಗಳ ಕೋಟಾವನ್ನು ಪೂರ್ಣಗೊಳಿಸಲು ಸಾಧ್ಯವಿದೆಯೇ ಎಂಬುದು ಕೂಡ ಸ್ಪಷ್ಟತೆಯಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.
ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ತಂಡ: ಕೆಎಲ್ ರಾಹುಲ್ (ನಾಯಕ) (ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ಆಂಡ್ರ್ಯೂ ಟೈ, ದುಷ್ಮಂತ ಚಮೀರಾ, ಅಂಕಿತ್ ರಾಜ್ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್